ಮುಂಡರಗಿ: ಗದಗ ಜಿಲ್ಲೆಯಲ್ಲಿ ಕಳ್ಳರ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಇತ್ತೀಚೆಗೆ ಮುಂಡರಗಿ ಪಟ್ಟಣದಲ್ಲಿ ನಡೆದಿರುವ ಮನೆಗಳ್ಳತನ ಪ್ರಕರಣ ಜನರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ವಿದ್ಯಾನಗರ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಳ್ಳರು ಕೈಚಳಕ ತೋರಿದ್ದಾರೆ.
ವರದಿ: ಮಹಲಿಂಗೇಶ ಹಿರೇಮಠ.ಗದಗ
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು, ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸಿದ್ದಾರೆ. ಇಬ್ಬರು ಮನೆಮಾಲೀಕರ ಮನೆಗಳಿಗೆ ಕಳ್ಳರು ನುಗ್ಗಿದ್ದು, ಓರ್ವ ಮನೆಮಾಲೀಕರಾದ, ಶಿಕ್ಷಕರಾದ ಅಶೋಕ ಭಜಂತ್ರಿ ಕುಟುಂಬದವರು ಧಾರ್ಮಿಕ ಕಾರ್ಯ ನಿಮಿತ್ತ ಶ್ರೀಶೈಲಂಗೆ ತೆರಳಿದ್ದರೆ,ಇನ್ನೋರ್ವ ಮನೆ ಮಾಲೀಕ, ಮಂಜುನಾಥ ಹದಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಕಳ್ಳರ ದೃಶ್ಯ ಸಿಸಿಟಿವಿಯಲ್ಲಿ ಸೆರೆ…! ಮೇಲಿನ ಲಿಂಕ್ ಕ್ಲಿಕ್ ಮಾಡಿ…Subscribe ಮಾಡಿ..
ಮನೆಗೆ ಹಾಕಿದ್ದ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು, ಅಪಾರ ಪ್ರಮಾಣದ ಬಂಗಾರಾಭರಣಗಳು, ನಗದು ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಕಳ್ಳರ ಚಲನವಲನ ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಮುಸುಕುಧಾರಿಗಳಾಗಿ ವಿದ್ಯಾನಗರದಾದ್ಯಂತ ಸಂಚರಿಸಿದ ದೃಶ್ಯಗಳು ದಾಖಲಾಗಿವೆ.
ಘಟನೆ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ರಾತ್ರಿ ಸಮಯದಲ್ಲಿ ಪೊಲೀಸರ ಗಸ್ತು ಸಮರ್ಪಕವಾಗಿಲ್ಲ” ಎಂದು ಆರೋಪಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಕಳ್ಳತನದ ಮಾಹಿತಿ ಪಡೆದ ತಕ್ಷಣ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಮುಂದುವರಿಸಲಾಗಿದೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಳ್ಳರ ಹಾವಳಿ ತಡೆಗಟ್ಟಲು ರಾತ್ರಿ ಗಸ್ತು ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
