ಬೆಂಗಳೂರು: ಸಿದ್ಧಗಂಗಾ ಮಠ ಎಂದರೆ ದೇಶದಲ್ಲಿಯೇ ಹೆಸರು ಮಾಡಿರುವ ಮಠ.ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವೆ, ಆಶ್ರಯ ನೀಡಿ ಇಂದಿಗೂ ತನ್ನದೇ ಆದ ಪ್ರಖ್ಯಾತಿ ಹೊಂದಿರೋ ಮೂಲಕ ಅಸಂಖ್ಯಾತ ಭಕ್ತಗಣವನ್ನ ಹೊಂದಿದೆ.
ಅದರಲ್ಲೂ ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಶ್ರೀಗಳು ಬಡವಿದ್ಯಾರ್ಥಿಗಳ ದಾಸೋಹಕ್ಕಾಗಿ ಮಠದಲ್ಲಿ ಹಚ್ಚಿದ ಅಡುಗೆ ಒಲೆ ಈವರೆಗೂ ಆರಿಲ್ಲ. ಅಂತಹ ಪವಾಡ ಸದೃಶ್ಯರಾಗಿ ಬಾಳಿದವರು ಶಿವಕುಮಾರ ಸ್ವಾಮಿಜಿ. ಸಿದ್ಧಗಂಗೆಯ ಶಿವಕುಮಾರ ಸ್ವಾಮಿಜಿ ಅಂದರೆ, ಕರ್ನಾಟಕದ ಹೆಮ್ಮೆ.ಕರ್ನಾಟಕದ ರತ್ನ. ಈ ಮಹಾಪುರುಷನನ್ನ ಅದೆಷ್ಟೂ ಬಾರಿ ಸ್ಮರಣೆ ಮಾಡಿದರೆ ಸಾಲದು. ಪ್ರತಿ ಜಿಲ್ಲೆಗಳಲ್ಲಿ ಶಿವಕುಮಾರ ಸ್ವಾಮಿಜಿ ಪ್ರತಿಮೆ ಸ್ಥಾಪಿಸೋ ಮೂಲಕ ಅವರನ್ನ ಪೂಜಿಸಿ ಆರಾಧನೆ ಮಾಡುತ್ತಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಂತೂ ಪ್ರತಿ ಗಲ್ಲಿಗಲ್ಲಿಗಳಲ್ಲೂ ಸ್ವಾಮಿಜಿಗಳ ಪ್ರತಿಮೆ ಸ್ಥಾಪಿಸಿ ನಡೆದಾಡುವ ದೇವರ ಸ್ಮರಣೆಯನ್ನ ನಿರಂತರವಾಗಿ ಮಾಡುತ್ತಿದ್ದಾರೆ.
ಆದರೆ, ವಿಪರ್ಯಾಸ ಅಂದರೆ ಇಂಥಹ ಪುಣ್ಯಾತ್ಮನ ಪ್ರತಿಮೆಯ ಮೇಲೂ ದುಷ್ಟ ಕಿಡಿಕೇಡಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಶ್ರೀಗಳ ಪ್ರತಿಮೆಯನ್ನ ಭಗ್ನಗೊಳಿಸೋ ಮೂಲಕ ಕುಕೃತ್ಯ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಯಾವ ಪ್ರದೇಶದಲ್ಲಿ ನಡೆದಿದೆ ಎಂದು ಸದ್ಯಕ್ಕೆ ನಿಖರವಾಗಿ ಮಾಹಿತಿ ತಿಳಿದುಬಂದಿಲ್ಲ. ಪ್ರತಿಮೆಯ ಹಣೆ ಭಾಗದಲ್ಲಿ ದುರುಳರು ಭಗ್ನಗೊಳಿಸಿದ್ದು, ಘಟನೆಗೆ ಎಲ್ಲೆಡೆ ವ್ಯಾಪಕ ಆಕ್ರೋಶವಾಗಿದೆ. ಕೂಡಲೇ ದುಷ್ಕೃತ್ಯ ಎಸಗಿದ ಪುಂಡರನ್ನ ತಕ್ಷಣ ಬಂಧಿಸಿ ಕಠೀಣ ಶಿಕ್ಷೆನೀಡಲಿ ಎಂದು ಅಸಂಖ್ಯಾತ ಭಕ್ತರು ಆಗ್ರಹಿಸಿದ್ದಾರೆ.
ಅಲ್ಲದೇ,ಅನೇಕ ರಾಜ್ಯಕೀಯ ಜನಪ್ರತಿನಿಧಿಗಳು ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಧಾರವಾಡ ಶಾಸಕ ಅರವಿಂದ ಬೆಲ್ಲದ ಸಹ ತಮ್ಮ X ಖಾತೆಯಲ್ಲಿ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದರೆ ಬೆಲ್ಲದವರ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಉಂಟಾಗಿದೆ.
ಏನು ಹೇಳಿದ್ರು ಬೆಲ್ಲದ!
ಜಾತಿ-ಧರ್ಮದ ಭೇದವಿಲ್ಲದೇ ಲಕ್ಷಾಂತರ ಬಡಮಕ್ಕಳಿಗೆ ಅನ್ನ-ಅಕ್ಷರ-ಆಶ್ರಯ ನೀಡಿದ ನಡೆದಾಡುವ ದೇವರ ಮೇಲೂ ಮತಾಂಧರ ಕೆಂಗಣ್ಣು ಬಿದ್ದಿದೆ. ಇಂತಹ ಪುಂಡರ ಹೆಡೆಮುರಿ ಕಟ್ಟಬೇಕಿದ್ದ ಸರ್ಕಾರವೇ, ಸಾಧು-ಸಂತರ ಮೇಲೆ FIR ದಾಖಲಿಸುವ ಮೂಲಕ ಈ ಭಯೋತ್ಪಾದಕರಿಗೆ ನೈತಿಕ ಬೆಂಬಲ ನೀಡುತ್ತಿದೆ.
@INCKarnataka ಸರ್ಕಾರದ ಓಲೈಕೆ, ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣವೇ ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ!
ಬೆಂಗಳೂರಿನಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಗೆ ಅಪಮಾನ ಮಾಡಿದ ಸಮಾಜ ಘಾತುಕರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ!
@Arvind Bellad
ಹೀಗೆ ಬೆಲ್ಲದವರ ಸೋಶಿಯಲ್ ಮೀಡಿಯಾದಲ್ಲಿನ ಶ್ರೀಗಳ ಕುರಿತಾದ ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯ ಬಂದಿದ್ದು, ಅನೇಕರು ಒಂದು ಕೋಮಿನ/ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸವಾಗಬಾರದು. ಜೊತೆಗೆ ಸಮಗ್ರ ತನಿಕೆಯಾಗಬೇಕೆಂದು ಬರೆದುಕೊಂಡಿದ್ದಾರೆ.
ಇನ್ನೂ ಮುಂದುವರೆದು ಕೆಲವರು, ಬೆಲ್ಲದವರ ಅಭಿಪ್ರಾಯಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. “ಹೆಸರಲ್ಲಷ್ಟೇ ಬೆಲ್ಲ ಇದ್ರೆ ಸಾಲದು ನಿಮ್ಮ ಮಾತಲ್ಲೂ ಬೆಲ್ಲ ಇರ್ಲಿ ಬಾಯ್ ಬಿಟ್ರೆ ಬರಿ ವಿಷ ಕಾರೋ ಮಾತು ಬೇಡ…” “ಯಾರ್ ಮಾಡಿದ್ದಾರೆ ಅನ್ನೋದು ನೀವೇ ಎಲ್ಲಕ್ಕೂ ಮುಂಚೆ ಹೇಳ್ತಿದೀರಾ ಅಂದ್ರೆ ನೀವೇ ಮಾಡ್ಸಿ ಬೇರೆಯವರ ಮೇಲೆ ಹಾಕ್ತಿರಬಹುದು… ಯತ್ನಾಳ್ ಬಾಯ್ ಮುಚ್ಚಿಸೋ ಧೈರ್ಯ ಇಲ್ದೆ ಇಲ್ಲಿ ಬಂದು ಬೆಂಕಿ ಹಚ್ಚೋ ಮಾತ್ ಯಾಕ್ ಆಡ್ತೀರಾ ಸ್ವಾಮಿ…” ಎಂದು ಬೆಲ್ಲದವರ ಪೋಸ್ಟ್ ಗೆ ಕೆಲವರು ಜೈ ಅಂತಿದ್ದರೆ, ಇನ್ನೂ ಹಲವರು ಧಿಕ್ಕಾರ ಅನ್ನುತ್ತಿದ್ದಾರೆ.
ಅದೇನೆ ಇರಲಿ, ನಮ್ಮೆಲ್ಲರ ನಡೆದಾಡುವ ದೇವರ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವದನ್ನ ಕೈಬಿಟ್ಟು, ಮೊದಲು ಇಂಥಹ ಘಟನೆಗೆ ಕಾರಣರಾದವರನ್ನ ಹೆಡೆಮುರಿ ಕಟ್ಟಿ, ಮುಂದೆ ಈ ರೀತಿಯ ಅವಘಡಗಳು ನಡೆಯದಂತೆ ಕ್ರಮ ಕೈಗೊಳ್ಳಿ ಎಂದು ಸಿದ್ಧಗಂಗೆಯ ಅಪಾರ ಭಕ್ತಸಮೂಹ ಆಗ್ರಹಿಸಿದೆ.