ಗದಗ, ಜೂನ್ 18:2024 ರ ಡಿಸೆಂಬರ್ 16 ರಂದು ನಡೆದಿದ್ದ ಮಧುಶ್ರೀ ಎಂಬ ಯುವತಿಯ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಖತರ್ನಾಕ್ ಆರೋಪಿ, ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಿರುವ ಪ್ರಕರಣವಾಗಿ ತಲೆದೋರಿದೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದ್ದ, ಕೊಲೆ ಪ್ರಕರಣ ಹಲವು ತಿರುವುಗಳನ್ನ ಪಡೆಯುತ್ತಾ ಹೊರಟಿದ್ದು, ಗ್ರಾಮದ ಹೊರವಲಯದಲ್ಲಿ ನಡೆದ ಶೋಧ ಕಾರ್ಯದಿಂದ ಮೃತದೇಹದ ಕೆಲ ಭಾಗಗಳು ಪತ್ತೆಯಾಗಿದ್ದು, ಪ್ರಮುಖ ಭಾಗವಾದ ತಲೆ ಬುರುಡೆ ಇನ್ನೂ ಪತ್ತೆಯಾಗಿಲ್ಲ.
ಆರೋಪಿ ಸತೀಶ್ ಹಿರೇಮಠ ಎನ್ನುವ ಯುವಕ, ಮದುವೆಗೆ ಒತ್ತಾಯಿಸಿದ್ದ ಮಧುಶ್ರೀ ಎಂಬ ತನ್ನ ಪ್ರೇಯಸಿಯನ್ನು ಜಮೀನಿಗೆ ಕರೆದುಕೊಂಡು ಹೋಗಿ ಬರ್ಬರವಾಗಿ ಕೊಂದಿರುವುದು ಈಗಾಗಲೇ ಖಚಿತವಾಗಿದೆ. ಆದರೆ, ಹತ್ಯೆಯ ನಂತರ ಪೊಲೀಸ್ ತನಿಖೆಗೆ ದಾರಿ ತಪ್ಪಿಸುವ ನಿಟ್ಟಿನಲ್ಲಿ, ದೃಶ್ಯ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿದ ಹಾಗೂ ಭಿನ್ನ ಸ್ಥಳಗಳನ್ನು ತೋರಿಸಿ ಪೊಲೀಸರಿಗೆ ಗೊಂದಲ ಉಂಟುಮಾಡುತ್ತಿದ್ದ ಹಂತಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ.
ಶೋಧ ಕಾರ್ಯದಲ್ಲಿ ತೀವ್ರತೆ:
ಗದಗ ಉಪವಿಭಾಗಾಧಿಕಾರಿ ಹಾಗೂ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರ ನೇತೃತ್ವದ ತಂಡ, ವೈದ್ಯಕೀಯ ತಜ್ಞರು ಹಾಗೂ ಎಫ್ಎಸ್ಎಲ್ ತಜ್ಞರು ಸೇರಿ ಯುವತಿಯ ತಲೆ ಬುರುಡೆ ಸೇರಿದಂತೆ ಯುವತಿ ಅಸ್ತಿ ಪತ್ತೆಹಚ್ಚಲು ನಾರಾಯಣಪುರ ಗ್ರಾಮದ ಹಳ್ಳ ಹಾಗೂ ಭತ್ತದ ಜಮೀನಿನಲ್ಲಿ ಶೋಧ ನಡೆಸಿದರು. ಆರೋಪಿ ತೋರಿಸಿದ್ದ ಎರಡು ಸ್ಥಳಗಳಲ್ಲಿ ಅಗೆದರೂ ಮುಖ್ಯ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಒಂದು ಕಡೆ ಮಧುಶ್ರೀ ಚಪ್ಪಲಿ, ಕೂದಲು, ಬಟ್ಟೆಗಳು ಸಿಕ್ಕಿದ್ದರೆ, ಇನ್ನೊಂದು ಕಡೆ ಯಾವುದೇ ಕುರುಹು ಪತ್ತೆ ಆಗಿಲ್ಲ.
ಪೊಲೀಸರಿಗೆ ಸವಾಲು – ನ್ಯಾಯಕ್ಕೆ ಎದುರಿರುವ ದಾರಿ ಕಠಿಣ:
ಹತ್ಯೆ ಮಾಡಿದ ನಂತರ, ಪೊಲೀಸರು ತನಿಖೆಯಲ್ಲಿ ಒತ್ತಾಸೆಯಾಗಿ ಬಳಸಿದ ಸತೀಶ್, ಈಗ ತನಿಖಾಧಿಕಾರಿಗಳಿಗೆ ತೊಂದರೆ ನೀಡುತ್ತಿರುವುದರಿಂದ, ಈ ಪ್ರಕರಣ ಮತ್ತಷ್ಟು ಕುತೂಹಲದಾಯಕ ರೂಪ ಪಡೆದಿದೆ. ಆರೋಪಿ ಕಠಿಣ ಹಾಗೂ ಅಪರಾಧ ಚಾಣಾಕ್ಷತನದ ಮನೋಭಾವ ತೋರಿಸುತ್ತಿರುವುದರಿಂದಲೇ ಶೋಧ ಕಾರ್ಯವೂ ವಿಫಲವಾಗುತ್ತಿದೆ ಎನ್ನಲಾಗಿದೆ.
ಈ ಪ್ರಕರಣದ ಪೂರ್ಣ ತನಿಖೆ ಇದೀಗ ಮತ್ತಷ್ಟು ಗಂಭೀರ ಆಯಾಮ ಪಡೆದುಕೊಂಡಿದ್ದು, ಪ್ರೇಮ, ನಂಬಿಕೆ, ದ್ರೋಹ ಹಾಗೂ ಕ್ರೌರ್ಯದ ಸಂಕೀರ್ಣ ಚಿತ್ರಣವೇ ಇಂತಿ ಈ ಘಟನೆಯ ಹಿನ್ನಲೆಯಲ್ಲಿ ಎದುರಾಗುತ್ತಿದೆ. ಪೊಲೀಸರು ಮುಂದಿನ ದಿನಗಳಲ್ಲಿ ತಲೆ ಬುರುಡೆ ಪತ್ತೆಹಚ್ಚುವಲ್ಲಿ ಯಶಸ್ವಿಯಾದರೆ, ಈ ಪ್ರಕರಣಕ್ಕೆ ನಿರ್ಣಾಯಕ ತಿರುವು ಸಿಗಲಿದೆ.
ಏನಿದು ಘಟನೆ..
ಗದಗ: ಪ್ರೇಮದಲ್ಲಿ ಹುಚ್ಚುತನ ತೋರಿದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೇವಲ “ಮದುವೆ ಮಾಡಿಕೋ” ಎಂದ ಕಾರಣಕ್ಕೆ ಕೊಲೆ ಮಾಡಿದ್ದ ಕೃತ್ಯ ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ದೃಶ್ಯ ಸಿನಿಮಾಕ್ಕೂ ಸೂಟಾಗುವಂತೆ ನಡೆದ ಈ ಘಟನೆಗೆ ಸಾಕ್ಷಿಯು ಪುಡಿಯಾಗಿತ್ತು ಎಂಬ ಭ್ರಮೆಯಲ್ಲಿ ಆರೋಪಿ ಇದ್ದರೂ, ಒಂದು ಮೆಸೇಜ್ ಆತನ ಜೀವನವನ್ನೇ ತಿರುವು ಮಾಡಿಸಿತು. ಬೆಟಗೇರಿ ಬಡಾವಣೆ ಪೊಲೀಸರ ಜಾಣತನದಿಂದ ಕೊಲೆಯ ಸತ್ಯಾಂಶ ಭಾಸವಾಗಿದ್ದು, ಆರೋಪಿಯು ಇದೀಗ ಕಾನೂನು ಕೈಯಲ್ಲಿದ್ದಾರೆ.
ಪ್ರೇಮ… ದೂರವು… ಕೊಲೆಗೂ ಕಾರಣವಾಯಿತು..!
ನಾರಾಯಣಪುರ ಗ್ರಾಮದ ಯುವತಿ ಮಧುಶ್ರೀ ಅಂಗಡಿ (24), ಗ್ರಾಮದವನಾದ ಸತೀಶ್ ಹಿರೇಮಠ (28) ಎಂಬವನೊಂದಿಗೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಮದುವೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಕುಟುಂಬದಿಂದ ಒತ್ತಡ ಎದುರಾದ ಮಧುಶ್ರೀ, ಸಂಬಂಧಿಕರ ಮನೆಯಲ್ಲಿದ್ದಳು. ಆದರೆ ಪ್ರೇಮಜೋಡಿ ಮತ್ತೆ ಸಂಪರ್ಕದಲ್ಲಿದ್ದು, 2024ರ ಡಿಸೆಂಬರ್ 16 ರಂದು ರಾತ್ರಿ ಮಧುಶ್ರೀ ಸಂಬಂಧಿಕರ ಮನೆಯಿಂದ ಹೊರಟ ಬಳಿಕ ಮರಳಿ ಮನೆಗೆ ಬಂದಿರಲಿಲ್ಲ.
ಕೊಲೆ ಸಂತ್ರಸ್ತೆ ನಾಪತ್ತೆ ಪ್ರಕರಣವಾಗಿ ದಾಖಲೆ..
ಮಧುಶ್ರೀ ಸಂಬಂಧಿಕರು ಹಲವೆಡೆ ಹುಡುಕಾಟ ನಡೆಸಿದರೂ ಏನೂ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ 2025ರ ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತು. ಪೊಲೀಸರು ಮೊದಲಿನಿಂದಲೇ ಸತೀಶ್ನ ಮೇಲೆ ಅನುಮಾನ ಹೊಂದಿದ್ದರು. ವಿಚಾರಣೆ ವೇಳೆ “ನಾನು ಕೊನೆಗೆ ಬಿಟ್ಟು ಹೋಗಿದ್ದೆ, ನಂತರ ಏನು ಗೊತ್ತಿಲ್ಲ” ಎಂದು ಆತ ಬಣ್ಣ ಬಣ್ಣದ ಕಥೆ ಹೇಳಿದ್ದ.
ಸಿಸಿಟಿವಿ ಮತ್ತು ಮೆಸೇಜ್ ಕೊಟ್ಟ ಬೆಳಕು..!
ಸಿಸಿಟಿವಿ ಫುಟೇಜ್ ನಲ್ಲಿ ಮಧುಶ್ರೀ ಮತ್ತು ಸತೀಶ್ ಒಂದೇ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದವು. ಜೊತೆಗೆ, ಆ ದಿನದಿಂದ ಸ್ವಿಚ್ ಆಫ್ ಆಗಿದ್ದ ಸತೀಶ್ ಮೊಬೈಲ್ಗೆ ಕಂಪನಿ ಮೆಸೇಜ್ ಒಂದರ ಲೊಕೇಶನ್ ಶಂಕೆ ಹುಟ್ಟಿಸಿತು. ಸತೀಶ್ ಹೇಳಿದ್ದ ಸ್ಥಳಕ್ಕಿಂತ ದೂರದಲ್ಲಿ ಫೋನ್ ಕಾರ್ಯನಿರ್ವಹಿಸಿದ್ದ ರಹಸ್ಯ ಬಹಿರಂಗವಾಯಿತು.
ಅದೇ ಮೌನ ಮುರಿದು… ಕೊಲೆ ಒಪ್ಪಿಕೊಂಡ ಆರೋಪಿ..!
ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಕೊಲೆ ಹಿಂದೆ ಇದ್ದ ಕಹಿ ಸತ್ಯ ಹೊರಬೀಳಿತು. ಸತೀಶ್, ಮಧುಶ್ರೀ ಮದುವೆ ಬಗ್ಗೆ ಹಠವಿದ್ದ ಕಾರಣ, ಜಗಳಕ್ಕೆ ಮುಂದಾದ ತಕ್ಷಣವೇ ಆಕೆಯ ಕುತ್ತಿಗೆಗೆ ವೇಲ್ನಿಂದ ಬಿಗಿದು ಹತ್ಯೆ ಮಾಡಿದ್ದ. ಬಳಿಕ ನಾರಾಯಣಪುರದ ತೋಟದ ಮನೆ ಹತ್ತಿರವಿರುವ ಹಳ್ಳದಲ್ಲಿ ಶವವನ್ನು ಹೊತ್ತು ಹಾಕಿದ. ಬಳಿಕ ತಾನೊಬ್ಬ ನಿರಪರಾಧಿಯಂತೆ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಸದಾ ತಲೆ ತಗ್ಗಿಸಿ ಬಾಳುತ್ತಿದ್ದ.
ದೃಶ್ಯ ಸಿನಿಮಾ ಶೈಲಿಯ ಸಾಕ್ಷಿ ನಾಶದ ಆಟ ವಿಫಲ..!
ಆರೋಪಿ ಮರುಮರು ಹಳ್ಳಿ ಕಡೆಗೆ ಹೋಗಿ ಎಲುಬುಗಳನ್ನು ಬೇರೆಬೇರೆ ಕಡೆ ಎಸೆದು ಸಾಕ್ಷ್ಯ ನಾಶ ಮಾಡುವ ಯತ್ನ ಮಾಡಿದ್ದ. ಆದರೆ ಆನಂದೋದ್ಗಾರ ಪಡುವಂತಿರುವ ವಿಷಯವೆಂದರೆ, ಆತನ ಮೊಬೈಲ್ಗೆ ಬಂದ ಒಂದೇ ಒಂದು ಮೆಸೇಜ್ ಎಲ್ಲವನ್ನು ಬಯಲಾಗಿಸಿತು. ಶವವಿರುವ ಸ್ಥಳವನ್ನೇ ತಾನು ತೋರಿಸಿದ್ದಾನೆ. ಕೆಲವು ಎಲುಬುಗಳು ಪತ್ತೆಯಾಗಿದ್ದು, ಶವದ ತಲೆ ಭಾಗ ಇನ್ನೂ ಸಿಕ್ಕಿಲ್ಲ. ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.