ಗದಗ:ಇಂದು ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆ ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ “ಯುವಕರ ನಡೆ.ವಿಕಸಿತ ಭಾರತದ ಕಡೆ” ಎಂಬ ಜಾಗೃತ ಜಾಥಾ ನಡೆಸಲಾಯಿತು.
ನಗರದ ಮುಳಗುಂದ ನಾಕಾದಲ್ಲಿನ ಅಡವೀಂದ್ರ ಸ್ವಾಮಿ ಮಠದಿಂದ ವಿವೇಕ ನಡಿಗೆ ಪ್ರಾರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ತೋಂಟದಾರ್ಯ ಮಠದಲ್ಲಿ ಸಮಾರೋಪವಾಯಿತು.

ಈ ವೇಳೆ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಬಾಳಿಕಾಯಿಯವರು ಮಾತನಾಡಿ “ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ವಿರಮಿಸಬೇಡಿ” ಎಂದು ಸ್ವಾಮಿ ವಿವೇಕಾನಂದರು ಹೇಳಿದ ಈ ಮಾತು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಪ್ರತಿ ಮನುಷ್ಯನಿಗೂ ಸ್ಫೂರ್ತಿಯಾಗುವ ಶಕ್ತಿ. ಜೊತೆಗೆ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಐತಿಹಾಸಿಕ ಭಾಷಣ ಮಾಡುವುದರ ಮೂಲಕ ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿದ ವೀರ ಸನ್ಯಾಸಿ ವಿವೇಕಾನಂದರು,ಅಹಿಂಸಾ ಪ್ರತಿಪಾದಕರಾದ ಮಹಾತ್ಮ ಗಾಂಧೀಜಿಯವರು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಗೂ ಪ್ರೇರಣೆಯಾದ ಶಕ್ತಿ ಸ್ವಾಮಿ ವಿವೇಕಾನಂದರು, ಅವರು ಕೇವಲ 39 ವರ್ಷಗಳ ಕಾಲ ಬದುಕಿದರೂ ಕೂಡ ಇಡೀ ಜಗತ್ತಿಗೆ ಇವತ್ತಿಗೂ ಕೂಡ ದಿವ್ಯ ಶಕ್ತಿಯಾಗಿ ಪ್ರಜ್ವಲಿಸುತ್ತಿದ್ದಾರೆ.
ಪಾಶ್ಚಾತ್ಯ ಜಗತ್ತಿಗೆ ವೇದಾಂತ ಮತ್ತು ಯೋಗದ ಬಗ್ಗೆ ಪರಿಚಯಿಸಿ 19 ನೇ ಶತಮಾನದ ಅಂತ್ಯದಲ್ಲಿ ಹಿಂದೂ ಧರ್ಮವನ್ನು ಜಗತ್ತಿನ ಗಮನಕ್ಕೆ ತಂದರು. ಇಂದು ನಾವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವ ಮೂಲಕ ಅವರ ಮಹಾನ್ ಚೇತನವನ್ನು ಗೌರವಿಸುವ ಈ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ ಅಕ್ಕಿ, ನಗರಸಭೆ ಸದಸ್ಯರಾದ ಅನೀಲ ಅಬ್ಬಿಗೇರಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಧೀರ ಕಾಟಿಗಾರ, ನಿಕಟಪೂರ್ವ ಯುವ ಮೋರ್ಚಾ ಅಧ್ಯಕ್ಷರಾದ ಶಿವು ಹಿರೇಮನಿ ಪಾಟೀಲ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ರಾಜೇಶ ಅರಕಾಲ, ಗ್ರಾಮೀಣ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಅರವಿಂದ ಅಣ್ಣಿಗೇರಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ನೆರೆಗಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.