ಗದಗ: ಜಗಳ ಬಿಡಿಸಲು ಬಂದ ಯುವಕನ ಕುತ್ತಿಗೆಗೆ ಸ್ಕ್ರೂ ಡ್ರೈವರ್ ಚುಚ್ಚಿ ದುಷ್ಕರ್ಮಿಗಳು ಪರಾರಿಯಾಗಿರೋ ಘಟನೆ ಗದಗ ನಗರದ ಜುಮ್ಮಾ ಮಸೀದಿ ಬಳಿ ನಿನ್ನೆ ರಾತ್ರಿ (ಡಿ.26.ಗುರುವಾರ) ನಡೆದಿದೆ.
ಘಟನೆಯಲ್ಲಿ ಅನಿಲ್ ಮುಳ್ಳಾಳ್ (27) ಸೇರಿದಂತೆ ಆರು ಯುವಕರಿಗೆ ಗಾಯವಾಗಿದ್ದು, ಸ್ಕ್ರೂ ಡ್ರೈವರ್ ನಿಂದ ಇರಿತಕ್ಕೊಳಗಾಗಿರೋ ಅನಿಲ್ ನನ್ನ ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗ್ತಿದೆ. ಇನ್ನುಳಿದ ಐವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗ್ತಿದೆ.
ಘಟನೆಯಲ್ಲಿ ಅನಿಲ್, ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ, ಶಾರುಖ್ ಮುಲ್ಲಾ ಅನ್ನೋ ಯುವಕರೆಲ್ಲರಿಗೂ ಗಾಯಗಳಾಗಿವೆ.
ಘಟನೆಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಹಲ್ಲೆ ನಡೆದಿರಬಹುದು ಎನ್ನಲಾಗಿದೆ. ಅನಿಲ್ ಎನ್ನುವ ಯುವಕ ಶ್ರೀರಾಮ ಸೇನೆಯ ಸಕ್ರೀಯ ಕಾರ್ಯಕರ್ತನಾಗಿದ್ದು, ಈತನನ್ನೇ ಟಾರ್ಗೆಟ್ ಮಾಡಿ ಹಲ್ಲೆ ನಡೆದಿರುವ ಬಗ್ಗೆ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ.
ಇನ್ನು ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಭೇಟಿ ನೀಡಿ, ಅನಿಲ್ ನ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.