ಲಕ್ಷ್ಮೇಶ್ವರ: ಒಳ ಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಎನ್. ನಾಗಮೋಹನ್ ದಾಸ್ ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸದರಿ ವರದಿಯ ಅಂಕಿ ಅಂಶಗಳನ್ನು ಬಂಜಾರ ಸಮುದಾಯದ ಪ್ರಗತಿಗೆ ಹಿನ್ನೆಡೆ ಉಂಟು ಮಾಡುವ ಅಂಶಗಳಿರುವುದರಿಂದ ಕೆಲವೊಂದು ಬದಲಾವಣೆ ಗಳನ್ನು ಸರ್ಕಾರ ಮಾಡಬೇಕೆಂದು ಮುಖಂಡ ರವಿ ಎಸ್ ಲಮಾಣಿ ಆಗ್ರಹಿಸಿದರು.
ಸಿಟಿ ಎಕ್ಸಪ್ರೆಸ್ ನ್ಯೂಸ್ ಜತೆ ಮಾತನಾಡಿದ ಅವರು, ಆಯೋಗದ ವರ್ಗಿಕರಣದಂತೆ ಗುಂಪು 4ರಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಜಾತಿಗಳಿಗೆ ಶೇ. 4ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಮಾನದಂಡಗಳ ಆಧಾರದ ಹಿಂದಿನ ಮೀಸಲಾತಿಯನ್ನು ಯತಾವತ್ತಾಗಿ ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿದರು.
ಸ್ಪೃಶ್ಯ ಮತ್ತು ಅಸ್ಪೃಶ್ಯ ಪದಗಳು ಸಂವಿಧಾನ ವಿರೋಧಿ ಪದಗಳಾಗಿದ್ದು, ಆಯೋಗದ ವರದಿಯ ಗುಂಪು 4ರಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಜಾತಿಗಳನ್ನು ಅಸ್ಪೃಶ್ಯರಲ್ಲದ ಜಾತಿಗಳು ಎಂದು ನಮೂದಿಸಿದ್ದು, ಕೂಡಲೇ ಈ ಅಸಂವಿಧಾನಿಕ ಪದ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಮೀಕ್ಷೆಯಲ್ಲಿ ಸಹಸ್ರಾರು ಬಂಜಾರ ವಲಸಿಗರಾಗಿದ್ದಾರೆ.
ಸಮಿಕ್ಷೆಯಲ್ಲಿ ಹಲವಾರು ಬಂಜಾರಾ ಕುಟುಂಬಗಳು ಹೊರಗೆ ಉಳಿದಿವೆ ಎಂಬ ಮಾಹಿತಿ ಇರುವುದರಿಂದ ಸರ್ಕಾರ ವಲಸಿಗರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ವರದಿಯನ್ನು ಸರ್ಕಾರ ಸಮಗ್ರವಾಗಿ ಚರ್ಚಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.