ಗದಗ: ನಮ್ಮ ಜೀವನವು ಭಗವಂತನೆಡೆಗೆ ಸಾಗುವ ಒಂದು ಯಾತ್ರೆಯಾಗಿದೆ. ಹೀಗೆ ಸಾಗುವ ದಾರಿಯಲ್ಲಿ ಅನೇಕ ಕಲ್ಲು, ಮುಳ್ಳುಗಳು, ಎಡರು, ತೊಡರುಗಳು ಎದುರಾಗುತ್ತವೆ. ಇವುಗಳನ್ನೆಲ್ಲ ದಾಟಿ ನಾವು ಗುರಿಯನ್ನು ತಲುಪಬೇಕಾದರೆ ಸಂಸ್ಕಾರವೆಂಬ ಸಂಸ್ಕೃತಿ ನಮ್ಮದಾಗಬೇಕು. ನಾವು ಸುಸಂಸ್ಕೃತರಾಗಲು ಪುರಾಣ ಪ್ರವಚನಗಳು ಸಹಾಯ ಮಾಡುತ್ತವೆ. ಅದಕ್ಕಾಗಿ ಅವುಗಳನ್ನು ಆಲಿಸಲು ನೀವು ಮಠಗಳೆಡೆಗೆ ಬರಬೇಕು ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವದ ನಾಲ್ಕನೆ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ, ಅನ್ಯ ಧರ್ಮವನ್ನು ಸಹಿಸಿಕೊಂಡು, ನಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಿ ಉಳಿಸಿಕೊಂಡು ಹೋಗುವುದೇ ನಿಜವಾದ ಧರ್ಮ. ಗುರುವಿಗೆ ಸಂಪೂರ್ಣವಾಗಿ ಶರಣಾದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ. ಸಮಾಜದೊಂದಿಗೆ ಅನ್ಯೋನ್ಯವಾಗಿ ಬೆರೆತು ಎಲ್ಲರೂ ನಮ್ಮವರೆ ಎಂಬ ಭಾವನೆಯಿಂದ ಬದುಕು ಸಾಗಿಸಬೇಕು. ಇದನ್ನು ಸಾಧಿಸಿ ತೋರಿದವರು ಶ್ರೀ ಗುರು ಕುಮಾರೇಶ್ವರರು. ಅವರ ಜೀವನವೇ ನಮಗೊಂದು ದಾರಿದೀಪ ಎಂದರು.
ಅಂದಪ್ಪ ವೀರಾಪುರ, ಬಸವರಾಜ ವೀರಾಪೂರ, ಸಿದ್ದಯ್ಯ ಅರಳೆಲೆಮಠ, ಬಸವಣ್ಣೆಪ್ಪ ನಾಶಿಪುಡಿ ಇದ್ದರು. ನಿಡಗುಂದಿ ಬಿಲ್ವಪತ್ರೆ ವನದ ಅಕ್ಕನ ಬಳಗದವರು ಪ್ರಸ್ತುತಪಡಿಸಿದ ಶ್ರೀ ಕುಮಾರೇಶ್ವರರ ನೂರೆಂಟು ನಾಮಾವಳಿ ಭಕ್ತರ ಮನ ಸೆಳೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಗಣ್ಯರನ್ನು, ಶಿಕ್ಷಕ ಹುಚ್ಚೀರಪ್ಪ ಈಟಿಯವರನ್ನು ಸನ್ಮಾನಿಸಲಾಯಿತು.