
ಗದಗ: MSIL ಮದ್ಯ ಮಾರಾಟ ಮಳಿಗೆಯ ಪರವಾನಿಗೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಗದಗ ಜಿಲ್ಲೆ ಲಕ್ಷೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮದ್ಯ ಮಾರಾಟ ಮಳಿಗೆ ಪರವಾನಿಗೆ ನೀಡುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜನರ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಹದಗೆಡುವುದಲ್ಲದೇ ಅನೇಕ ಕುಟುಂಬಗಳು ಬೀದಿಗೆ ಬರುತ್ತವೆ. ಮನೆ-ಮನೆಗಳಲ್ಲಿ ಹೊಡೆದಾಟ, ಜಗಳ ಹೆಚ್ಚುತ್ತವೆ. ಅಪ್ರಾಪ್ತ ವಯಸ್ಸಿನ ಯುವಕರು ಕುಡಿದ ಅಮಲಿನಲ್ಲಿ ತಮ್ಮ ತಂದೆ-ತಾಯಿಯನ್ನು ಲೆಕ್ಕಿಸದೇ ಅವಾಚ್ಯ ಶಬ್ದಗಳಿಂದ ಬೈದಾಡುವುದು, ಹೊಡೆಯುವುದು ಹೀಗೆ ಅನೇಕ ಅನಾಹುತಗಳು ಸಂಭವಿಸುತ್ತವೆ. ಸಾರ್ವಜನಿಕರೂ ಕೂಡ ಸಂಘಟನೆಯ ಮೊರೆ ಹೋಗಿದ್ದು, ಅಬಕಾರಿ ಆಯುಕ್ತರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಯಾರ ಒತ್ತಡಕ್ಕೂ ಕಿವಿಗೊಡದೇ ಊರಿನ ಹಿತವನ್ನು ಬಯಸುವಲ್ಲಿ ಮುಂದಾಗಬೇಕು. ಈ ಕುರಿತು ಕೂಲಂಕುಷವಾಗಿ ಚರ್ಚಿಸಿ MSIL ಮದ್ಯ ಮಾರಾಟ ಮಳಿಗೆ ಪರವಾನಿಗೆಯನ್ನು ಕೂಡಲೇ ತಡೆಹಿಡಿದು, ಇಲ್ಲಿನ ಸಾರ್ವಜನಿಕರು ನೆಮ್ಮದಿಯ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಒಂದು ವೇಳೆ ಮಳಿಗೆಗೆ ಪರವಾನಿಗೆ ನೀಡಿದ್ದೇ ಆದಲ್ಲಿ ನಮ್ಮ ಸಂಘಟನೆಯೊಂದಿಗೆ ಊರಿನ ಸಾರ್ವಜನಿಕರೆಲ್ಲೂ ಸೇರಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ, ರಮೇಶ ಹಂಗನಕಟ್ಟಿ, ಭಾಷಾ ಸಾಬ್ ಮಲ್ಸಮುದ್ರ, ನಾಗರಾಜ್ ಕ್ಷತ್ರಿಯ,ರುದ್ರಗೌಡ ಪಾಟೀಲ,ಸಂತೋಷ ಬಡಕಲ್,ಸಚಿನ ಮೇಲ್ಮುರಿ,ಬಸವರಾಜ ಮೇಲ್ಮುರಿ, ಅಬ್ದುಲ್ ಖಾದರ್ ಕೊಪ್ಪಳ, ವೀರಭದ್ರಯ್ಯ ಮಠಪತಿ,ಹೊನ್ನಪ್ಪ ದನಕಟ್ಟವರ,ಪ್ರದೀಪ ಬಳಿಗಾರ,ಫಕ್ಕಿರೇಶ ಅರಳಿ, ಫಕ್ಕಿರೇಶ ಶ ಇಟಗಿ, ಮಹೇಶ ಬಳಿಗಾರ, ಪುಟ್ಟಪ್ಪ ಹರಿಜನ, ಚಂದ್ರಶೇಖರ ಸರಸೂರಿ, ಶಿವಪುತ್ರಪ್ಪ ಲಮಾಣಿ, ಗಣೇಶ ಹುಲ್ಲೂರ, ಗಂಗಾಧರ ಹಡಪದ, ಹಾಲಪ್ಪ ಭಂಡಾರಿ ಸೇರಿದಂತೆ ಅನೇಕರು ಇದ್ದರು.