ಗದಗ : ವಿನಯ್ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟಿಯವರು ಮಾತನಾಡಿ, ನಮ್ಮ ದೇಶದ ವಿಜ್ಞಾನ ಪರಂಪರೆಯನ್ನು ಸ್ಮರಿಸುವ ಮಹತ್ವದ ದಿನವೇ ರಾಷ್ಟ್ರೀಯ ವಿಜ್ಞಾನ ದಿನ ಎಂದರು. ಪ್ರತಿವರ್ಷ ಫೆಬ್ರವರಿ ೨೮ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ೧೯೨೮ರ ಫೆಬ್ರವರಿ ೨೮ರಂದು ಖ್ಯಾತ ವಿಜ್ಞಾನಿ ಸಿ. ವಿ. ರಾಮನ್ ಅವರು “ರಾಮನ್ ಪರಿಣಾಮ”ವನ್ನು ಕಂಡುಹಿಡಿದ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅವರ ಈ ಮಹತ್ವದ ಆವಿಷ್ಕಾರಕ್ಕೆ ೧೯೩೦ರಲ್ಲಿ ನೋಬೆಲ್ ಪ್ರಶಸ್ತಿ ಲಭಿಸಿತು. ಇದು ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವ ಮಟ್ಟದ ಗೌರವ ತಂದ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ವಿಜ್ಞಾನ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ದೇಶದಲ್ಲಿ ವಿಜ್ಞಾನ ಬೆಳಗಲಿ, ಅದರ ಮೂಲಕ ತಮ್ಮ ಜ್ಞಾನ ಬೆಳೆಯಲಿ ಎಂದು ಶುಭ ಹಾರೈಸಿದರು.
ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನಸ್ಸು, ಪರಿಶೀಲಿಸುವ ಸ್ವಭಾವ ಮತ್ತು ಹೊಸದನ್ನು ಕಲಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಫಲತೆಗೆ ಹೆದರದೆ ಪ್ರಯತ್ನಿಸುವ ಧೈರ್ಯ ಹೊಂದಿದಾಗ ಮಾತ್ರ ಮಹತ್ತರ ಸಾಧನೆ ಸಾಧ್ಯ. ಇಂದಿನ ಸಣ್ಣ ಪ್ರಯೋಗವೇ ನಾಳೆಯ ಮಹಾನ್ ಆವಿಷ್ಕಾರಕ್ಕೆ ದಾರಿ ತೋರುತ್ತದೆ. ಸಮಾಜದಲ್ಲಿರುವ ಅಂಧಶ್ರದ್ಧೆಗಳನ್ನು ದೂರ ಮಾಡಿ ತರ್ಕಬದ್ಧ ಚಿಂತನೆಗೆ ಉತ್ತೇಜನ ನೀಡುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು ಎಂದು ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾವಿಧಿಯನ್ನು ಉಪ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಿಯಾನಾ ಮುಲ್ಲಾ ಬೋಧಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಸಂಬಂಧಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ರಚಿಸಿ ಪ್ರದರ್ಶಿಸಿದರು. ವಿಜ್ಞಾನ ವಿಷಯಾಧಾರಿತ ರಂಗೋಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನೂ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಕನ್ನಡ ಉಪನ್ಯಾಸಕರಾದ ಶ್ರೀಶೈಲ ಶಿ. ಬಡಿಗೇರ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
