ಮುಂಡರಗಿ:30
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೋಟೆ ಭಾಗದಲ್ಲಿ ರಕ್ಕಸ ನಾಯಿಗಳ ದಾಳಿ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಪುಟ್ಟ ಮಗು ಶ್ರೀಕೇಶವ ಅನ್ನೋ ಮಗು ರಕ್ಕಸ ನಾಯಿಗಳ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ನಾಯಿಗಳು ಮಗುವಿನ ತುಟಿ, ಕೆನ್ನೆ, ಹಣೆ ಭಾಗಗಳನ್ನು ಕ್ರೂರವಾಗಿ ಕಚ್ಚಿರುವ ಘಟನೆ ಸ್ಥಳಿಯರನ್ನ ಬೆಚ್ಚಿ ಬೀಳಿಸಿದೆ.
ಅಲ್ಲದೇ ನಾಯಿಗಳ ದಾಳಿ ವೃದ್ಧ ಮಹಾಬಲೇಶ್ವರ ಎಂಬುವರ ಮೇಲೆಯೂ ಸಂಭವಿಸಿದ್ದು, ಮಕ್ಕಳು ಹಾಗೂ ಹಿರಿಯರು ಯಾರೂ ಸುರಕ್ಷಿತವಿಲ್ಲವೆಂಬ ಭೀತಿ ಮರಳಿಸುತ್ತಿದೆ. ಮಗು ಮತ್ತು ವೃದ್ಧ ನರಳಾಟದ ಸ್ಥಿತಿಯಲ್ಲಿ ನೆಲಕ್ಕುರುಳಿದ್ದ ದೃಶ್ಯ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯ – ಪೋಷಕರ ಕಣ್ಣೀರಿನ ಕಹಿ ಕಥೆ..
ಗಾಯಗೊಂಡ ಪುಟ್ಟ ಶ್ರೀಕೇಶವನನ್ನು ತಕ್ಷಣವೇ ಜಿಲ್ಲಾಸ್ಪತ್ರೆಯಾದ ಗದಗ ಜಿಮ್ಸ್ ಆಸ್ಪತ್ರೆಗೆ ಕರೆದಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟು, ಸಂಕಟದಲ್ಲಿದ್ದ ಪಾಲಕರನ್ನ ಮತ್ತಷ್ಟು ದುಃಖಕ್ಕೆ ತಂದೊಡ್ಡಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರೂ, ಆಸ್ಪತ್ರೆ ಸಿಬ್ಬಂದಿ “ಬೆಡ್ ಖಾಲಿ ಇಲ್ಲ” ಎಂಬ ಕಾರಣ ನೀಡಿ ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ ಅನ್ನೋ ಆರೋಪವನ್ನ ಮಗುವಿನ ತಾಯಿ ಸುನಿತಾ ಮಾಡಿದ್ದಾರೆ. “ಇದು ಯಾವ ರೀತಿ ಸರ್ಕಾರಿ ಆಸ್ಪತ್ರೆ? ಮಗುವನ್ನು ಮನೆಯ ಕಡೆ ಕಳಿಸಿದ್ದಾರೆ, ನಮಗೆ ಹಣವಿಲ್ಲ, ಆದರೆ ಮಗುವಿನ ಜೀವವಿದೆ ಅಷ್ಟೆ!” ಎಂದು ಕಿಡಿಕಾರಿದ್ದಾರೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇಂಜೆಕ್ಷನ್ ಇಲ್ಲ, ಔಷಧಿ ಇಲ್ಲ – ಸಿಬ್ಬಂದಿ ಎಡವಟ್ಟು..
ಮಗುವಿಗೆ ಅಗತ್ಯವಿದ್ದ ರೇಬೀಸ್ ಇಂಜೆಕ್ಷನ್ ಮತ್ತು ಔಷಧಿಗಳನ್ನು ಹೊರಗಿನ ಮೆಡಿಕಲ್ನಿಂದ ತರುವಂತೆ ವೈದ್ಯರು ಹೇಳಿದರೆಂದರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವವನೇ ಬಡವನಿಗೆ ಯಾವ ರೀತಿ ನ್ಯಾಯ ಸಿಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. 416 ರೂಪಾಯಿ ಮೌಲ್ಯದ ಔಷಧಿಯನ್ನು ಹೊರಗಿನಿಂದ ತರಬೇಕಾಯಿತು. “ಉಚಿತ ಚಿಕಿತ್ಸೆ ಎಂದು ಸರ್ಕಾರ ಹೇಳ್ತಾ ಇರುವುದು, ಆದರೆ ನಿಜ ಜೀವನದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಮಗುವಿನ ತಾಯಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರಿ ವ್ಯವಸ್ಥೆಯ ವಿರುದ್ಧ ಸಾರ್ವಜನಿಕ ಕಿಡಿ:
ಗದಗದ ಜಿಮ್ಸ್ ವಿರುದ್ಧ ಪೋಷಕರ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, “ಇದು ನೈತಿಕವಾಗಿ ಸರಿಯಲ್ಲ. ಒಬ್ಬ ಪುಟ್ಟ ಮಗುವಿಗೆ ನೆರವಾಗಲಾಗದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಹಾಗೂ ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀಮ್ಸ್ ನಿರ್ದೇಶಕರ ಸ್ಪಷ್ಟನೆ..
ನಮ್ಮ ಸಿಬ್ಬಂದಿಗಳು ಮಾಡಿದ ಯಡವಟ್ಟಿನಿಂದ ಈ ರೀತಿ ಆಗಿದೆ. ನಮ್ಮ ಆಸ್ಪತ್ರೆಯಲ್ಲಿ ಯಾವುದೇ ಔಷಧದ ಕೊರತೆ ಇಲ್ಲ. ಹಾಗೇನಾದರೂ ಆಸ್ಪತ್ರೆಯಲ್ಲಿ ಲಭ್ಯವಿಲ್ಲವೆಂದರೂ, ನಿಗದಿತ ಸಮಯದೊಳಗೆ ಔಷಧಿ ತರಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲೇ ಇದೆ. ಆದರೂ ಸಿಬ್ಬಂದಿಗಳು ಹೊರಗಡೆ ಬರೆದುಕೊಟ್ಟಿರುವದು ತಪ್ಪು. ಇನ್ನು ಬೆಡ್ ಇಲ್ಲ ಎಂದು ಹೇಳಿಲ್ಲ. ಅವರಿಗೆ ಬೆಡ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆಯನ್ನೂ ನೀಡಿದ್ದೇವೆ. ಆದರೆ ರೇಬಿಸ್ ಇಂಜೆಕ್ಷನ್ ಸಲುವಾಗಿ, ಸಿಬ್ಬಂದಿ ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕಾಗಿತ್ತು. ಆದರೆ ಅದನ್ನ ಮಾಡದೇ, ಹೊರಗಡೆ ಖರೀದಿಸಿ ಎಂದು ಹೇಳಿರುವದು ಖಂಡಿತ ತಪ್ಪು.ಹೀಗಾಗಿ ಸಿಬ್ಬಂದಿ ವಿರುದ್ಧ ಸೂಕ್ತ ಕಠೀಣ ಕ್ರಮವನ್ನ ಜೀಮ್ಸ್ ಆಡಳಿತ ಮಂಡಳಿ ಜರುಗಿಸುತ್ತೆ ಎಂದು ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಮುಂಡರಗಿ ಪುರಸಭೆ ನಿರ್ಲಕ್ಷ್ಯ..
ಈಗಾಗಲೇ ಮುಂಡರಗಿ ಪಟ್ಟಣದಲ್ಲಿ ನಾಯಿಗಳ ದಾಳಿ ಇದೇ ಮೊದಲೇನಲ್ಲ. ಈ ಹಿಂದೆಯೂ ಮನೆ ಮುಂದೆ ಆಟವಾಡುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ನಾಯಿಗಳು ದಾಳಿ ಮಾಡಿದ್ದವು. ತಕ್ಷಣ ಎಚ್ಚೆತ್ತುಕೊಂಡಿದ್ದ ಪುರಸಭೆ ಆಡಳಿತ ಮಂಡಳಿ ನಾಯಿಗಳನ್ನ ಸೆರೆಹಿಡಿಯುವ ಆಪ್ರೇಷನ್ ಕೈಗೊಂಡು, ನೂರಾರು ನಾಯಿಗಳನ್ನ ಸ್ಥಳಾಂತರಿಸಿತ್ತು. ಆದರೆ ಸಾರ್ವಜನಿಕರ ಆಗ್ರಹದ ಪ್ರಕಾರ, ಪಟ್ಟಣದ ಮಧ್ಯೆ ಭಾಗದಲ್ಲೇ, ಮಾಂಸದ ಅಂಗಡಿಗಳು ಬೀಡು ಬಿಟ್ಟಿರುವದರಿಂದ, ನಾಯಿಗಳು ರಕ್ಕಸ ನಾಯಿಗಳಾಗಿ ಪರಿವರ್ತನೆಗೊಂಡಿವೆ. ಹಗಲು ಹೊತ್ತಿನಲ್ಲೇ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಂದರೆ ಮಾಂಸದ ಅಂಗಡಿಗಳನ್ನ ಪಟ್ಟಣದಿಂದ ಸ್ಥಳಾಂತರಿಸಬೇಕು.ಅಂದಾಗ ಮಾತ್ರ ನಾಯಿಗಳ ಹಾವಳಿಗೆ ಬ್ರೆಕ್ ಬೀಳುತ್ತದೆ.ಈ ಬಗ್ಗೆ ಪುರಸಭೆ ಆಡಳಿತ ಮಂಡಳಿ ಆರಂಭಶೂರತ್ವಕ್ಕೆ ಮಾತ್ರ ಸೀಮಿತವಾಗಿದೆ. ಈ ರೀತಿ ಘಟನೆ ನಡೆದಾಗ ಮಾತ್ರ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನಾದರೂ ಸಂಬಂಧಿತ ಅಧಿಕಾರಿಗಳು ತಕ್ಷಣವೇ ಗಮನಹರಿಸಿ, ತಮ್ಮ ಗಮನಕ್ಕೆ ಬಾರದೇ ನಡೆಯುವ ವೈದ್ಯಕೀಯ ವ್ಯವಸ್ಥೆಯಲ್ಲಿನ ತಪ್ಪುಗಳ ತಿದ್ದಿಗೆ ಕೈ ಹಾಕಬೇಕಾಗಿದೆ. ಇಲ್ಲದಿದ್ದರೆ ಇಂತಹ ದುರ್ಘಟನೆಗಳು ಮುಂದುವರೆಯುತ್ತಾ ಹೋಗುತ್ತವೆ.
