ಗದಗ:
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCM) ಅಧಿಕಾರಿಯಾದ ಎಂ.ಕೆ. ಸುರಕೋಡ ಅವರ ಮನೆ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
🖋ವರದಿ: ಮಹಲಿಂಗೇಶ ಹಿರೇಮಠ. ಗದಗ
ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ರಚಿಸಲಾದ ಆರು ತಂಡಗಳು ಗದಗ, ಧಾರವಾಡ ಸೇರಿದಂತೆ ಒಟ್ಟು ಆರು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶೋಧದ ವೇಳೆ ಅಧಿಕಾರಿ ಹೊಂದಿರುವ ಸ್ಥಿರ ಮತ್ತು ಚರ ಆಸ್ತಿಗಳ ಕುರಿತು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಸುಮಾರು ₹1.38 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳು ಪತ್ತೆಯಾಗಿದ್ದು, ಇದರಲ್ಲಿ ಆರು ಸೈಟ್ಗಳು (ಸುಮಾರು ₹13 ಲಕ್ಷ), ಒಂದು ಮನೆ (ಸುಮಾರು ₹45 ಲಕ್ಷ) ಹಾಗೂ 29 ಏಕರೆ ಕೃಷಿ ಜಮೀನು (ಸುಮಾರು ₹80.77 ಲಕ್ಷ) ಸೇರಿವೆ.
ಇದೇ ವೇಳೆ ಸುಮಾರು ₹89,250 ನಗದು, 152.96 ಗ್ರಾಂ ಚಿನ್ನ (ಸುಮಾರು ₹23.21 ಲಕ್ಷ ಮೌಲ್ಯ), 893 ಗ್ರಾಂ ಬೆಳ್ಳಿ (ಸುಮಾರು ₹2.05 ಲಕ್ಷ ಮೌಲ್ಯ) ಸೇರಿದಂತೆ ಹಲವು ಚರ ಆಸ್ತಿಗಳೂ ಪತ್ತೆಯಾಗಿವೆ. ಇದಲ್ಲದೆ ಸುಮಾರು ₹31.40 ಲಕ್ಷ ಮೌಲ್ಯದ ವಾಹನಗಳು ಹಾಗೂ ಇತರೆ ವಸ್ತುಗಳು ಸುಮಾರು ₹16 ಲಕ್ಷ ಮೌಲ್ಯ ಹೊಂದಿರುವುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಒಟ್ಟು ಪರಿಶೀಲನೆಯ ಪ್ರಕಾರ ಸುಮಾರು ₹1.82 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದು ಕಂಡುಬಂದಿದ್ದು, ಇದು ಅಧಿಕಾರಿ ಆದಾಯಕ್ಕೆ ಹೋಲಿಸಿದರೆ ಸುಮಾರು 227 ಶೇಕಡಾ ಹೆಚ್ಚು ಎನ್ನಲಾಗಿದೆ.
ಇದಲ್ಲದೆ ಶೋಧದ ವೇಳೆ ಬಿಸಿಎಂ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ನೀಡಲಾಗುವ ನೋಟ್ ಬುಕ್ ಗಳು, ಹಾಸಿಗೆಗಳು, ಮ್ಯಾಟ್ರೆಸ್ಗಳು ಹಾಗೂ ಅಡುಗೆ ಪಾತ್ರೆಗಳು ಆರೋಪಿತ ಅಧಿಕಾರಿಯ ಮನೆಯಲ್ಲಿರುವುದು ಪತ್ತೆಯಾಗಿದ್ದು, ಈ ಕುರಿತು ಬಿಸಿಎಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಲತಃ ರೋಣ ತಾಲೂಕಿನ ಕೌಜಗೇರಿ ಗ್ರಾಮದವರಾದ ಎಂ.ಕೆ. ಸುರಕೋಡ ಶಿರಹಟ್ಟಿಯಲ್ಲಿ BCM ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾಳಿ ವೇಳೆ ಪತ್ತೆಯಾದ ದಾಖಲೆಗಳು ಹಾಗೂ ಆಸ್ತಿಗಳ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
