ಗದಗ:
ಪೊಲೀಸ್ ಠಾಣೆಯೊಳಗೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಬಂಧಿಸಿದ್ದಾರೆ.
ಅರ್ಜಿಯೊಂದನ್ನು ವಜಾಗೊಳಿಸುವುದಕ್ಕೆ ₹13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ₹10 ಸಾವಿರಕ್ಕೆ ವ್ಯವಹಾರ ಕುದರಿಸಿಕೊಂಡಿದ್ದ ಎನ್ನಲಾಗಿದೆ.
ದೂರುದಾರರ ಮಾಹಿತಿ ಆಧರಿಸಿ ಯೋಜಿತ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಠಾಣೆಯಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಎಸ್ಐ ಇಂಗಳಹಳ್ಳಿಯನ್ನು ಬಲೆಗೆ ಬೀಳಿಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ದೂರಿನ ಹಿನ್ನೆಲೆ
ನಗರದ ಹುಡ್ಕೋ ಕಾಲನಿಯ ನಿವಾಸಿ ವಿರೇಶ ಪೂಜಾರ ಅವರು ಬುಧವಾರ ಗದಗ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ವಿರೇಶ ಅವರ ತಾಯಿಯ ಹೆಸರಿನಲ್ಲಿ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಲಾಗಿತ್ತು.
ಈ ಅರ್ಜಿಯನ್ನು ವಜಾ ಮಾಡಲು ಎಎಸ್ಐ ಇಂಗಳಹಳ್ಳಿ ಅವರು ₹13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ₹10 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ದೂರುದಾರರು ನಿಗದಿತ ಮೊತ್ತವನ್ನು ನೀಡುವ ಸಂದರ್ಭದಲ್ಲಿ, ಎಎಸ್ಐ ಇಂಗಳಹಳ್ಳಿ ಲಂಚ ಸ್ವೀಕರಿಸುತ್ತಿದ್ದಂತೆ ದಾಳಿ ನಡೆಸಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ವಿಜಯ ಬಿರಾದಾರ, ಪರಮೇಶ ಕವಟಗಿ, ಎಸ್.ಎಸ್. ತೇಲಿ, ಎಂ.ಎಂ. ಅಯ್ಯನಗೌಡ್ರ ಸೇರಿದಂತೆ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ನಿರಂತರ ಲೋಕಾದಾಳಿ
ಗದಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಶನಿವಾರ ಶಾಸಕ ಚಂದ್ರು ಲಮಾಣಿ ಅವರು ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಪೊಲೀಸ್ ಇಲಾಖೆಯ ಅಧಿಕಾರಿಯೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧನಕ್ಕೊಳಗಾಗಿರುವುದು ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಕ್ರಮಗಳಿಗೆ ಮತ್ತಷ್ಟು ಮಹತ್ವ ತಂದಿದೆ.
ಈ ಬೆಳವಣಿಗೆ ಗದಗ ಜಿಲ್ಲೆಯನ್ನು ಮತ್ತೊಮ್ಮೆ ರಾಜ್ಯದ ಗಮನಕ್ಕೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆ ಹಾಗೂ ಆಡಳಿತದ ಪಾರದರ್ಶಕತೆ ಕುರಿತು ಚರ್ಚೆಗೆ ಕಾರಣವಾಗಿದೆ.
ಮುಂದಿನ ತನಿಖೆಯ ಫಲಿತಾಂಶದ ಮೇಲೆ ಪ್ರಕರಣದ ದಿಕ್ಕು ನಿರ್ಧಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
