ಗದಗ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವ್ಯಾಪಕವಾಗಿ ವಿಸ್ತರಿಸಿದ್ದು, ಈ ಸರ್ಕಾರವೇ ಡ್ರಗ್ಸ್ ಮಾಫಿಯಾ ಕಂಟ್ರೋಲ್ಡ್ ಸರ್ಕಾರವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಗದಗನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗದಗನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ,ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲೇ ಅತಿ ಹೆಚ್ಚು ಡ್ರಗ್ಸ್ ಬಳಕೆ ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಕರ್ನಾಟಕ ಮತ್ತೊಂದು ‘ಉಡ್ತಾ ಪಂಜಾಬ್’ ಆಗಲಿದೆ. ಮುಂದೆ ‘ಉಡ್ತಾ ಕರ್ನಾಟಕ’ ಎನ್ನುವ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಡ್ರಗ್ಸ್ ಮಾಫಿಯಾ ವಿರುದ್ಧ ಈ ಹಿಂದೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿತ್ತು. ಈಗಲೂ ಸರ್ಕಾರ ಅಂತಹ ತಂಡ ರಚಿಸಿದೆ ಎನ್ನಲಾಗುತ್ತಿದೆ. ಆದರೆ ನೆಲಮಟ್ಟದಲ್ಲಿ ಯಾವುದೇ ಪರಿಣಾಮಕಾರಿಯಾದ ಕ್ರಮಗಳು ಕಾಣಿಸುತ್ತಿಲ್ಲ. ಡ್ರಗ್ಸ್ ಪೆಡ್ಲರ್ಗಳಿಗೆ ಪೊಲೀಸರ ಭಯವೇ ಇಲ್ಲ. ಹಲವಾರು ಪ್ರಕರಣಗಳಲ್ಲಿ ಪೊಲೀಸರ ಕಾರ್ಯವೈಖರಿ ನೋಡಿದರೆ ಆರೋಪಿಗಳಿಗೆ ಸುಲಭವಾಗಿ ಬೇಲ್ ಸಿಗುತ್ತಿರುವುದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಡ್ರಗ್ಸ್ ತಡೆಗೆ ಈಗಾಗಲೇ ವಿಶೇಷ ಕಾನೂನುಗಳಿವೆ. 1988ರಲ್ಲಿಯೇ ರೂಪಿಸಲಾದ ಕಾನೂನಿನಡಿ ಕನಿಷ್ಠ ಒಂದು ವರ್ಷ ಬೇಲ್ ಸಿಗದಂತೆ ಕಟ್ಟುನಿಟ್ಟಿನ ವಿಧಿಗಳು ಇವೆ. ಆದರೆ ಆ ಕಾನೂನುಗಳನ್ನೂ ಸರಿಯಾಗಿ ಜಾರಿಗೆ ತರಲಾಗುತ್ತಿಲ್ಲ. ಸ್ಪೆಷಲ್ ಕಾನೂನು ಇದ್ದರೂ ಅದನ್ನು ಬಳಸುವ ಮನಸ್ಥಿತಿ ಇಲ್ಲದಿರುವುದು ದುರ್ಬಾಗ್ಯ ಎಂದು ಬೊಮ್ಮಾಯಿ ಕಿಡಿಕಾರಿದರು.
ರಾಜ್ಯದ ಪೊಲೀಸ್ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂದರೆ, ಮಹಾರಾಷ್ಟ್ರದ ಪೊಲೀಸರು ಬಂದು ಕರ್ನಾಟಕದಲ್ಲಿ ಡ್ರಗ್ಸ್ ರೇಡ್ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯ ಪೊಲೀಸ್ ವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. ಇಲ್ಲಿನ ಕೆಲವು ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್ಗಳೊಂದಿಗೆ ಶಾಮೀಲಾದಿದ್ದಾರೆ ಎಂಬ ಶಂಕೆ ಜನರಲ್ಲಿ ಮೂಡಿದೆ ಎಂದರು.
ಡ್ರಗ್ಸ್ ಮಾಫಿಯಾ ಇಂದು ಎಲ್ಲ ಕಾಲೇಜುಗಳವರೆಗೂ ತಲುಪಿದೆ. ಹಾವೇರಿಯಲ್ಲೂ ಮಾಫಿಯಾ ಜಾಲ ವಿಸ್ತರಿಸಿದೆ. ಜಿಲ್ಲಾ ಕೇಂದ್ರಗಳಲ್ಲೂ ಡ್ರಗ್ಸ್ ಸುಲಭವಾಗಿ ಲಭ್ಯವಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಈ ಸರ್ಕಾರ ಡ್ರಗ್ಸ್ ದಂಧೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು. ಡ್ರಗ್ಸ್ ದಂಧೆ ನಡೆಯುವ ವ್ಯಾಪ್ತಿಯಲ್ಲಿರುವ ಎಲ್ಲ ಅಧಿಕಾರಿಗಳನ್ನು ತಕ್ಷಣ ಬದಲಾವಣೆ ಮಾಡಬೇಕು. ಹೊಸ, ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿ, ಸ್ಕ್ವಾಡ್ ರಚಿಸಿ ಡ್ರಗ್ಸ್ ಪೆಡ್ಲರ್ಗಳನ್ನು ಹಿಡಿದು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.
ದ್ವೇಷ ಭಾಷಣಕ್ಕೆ ಕಾನೂನು ತರುವ ಬದಲು ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕಾನೂನು ತರಬೇಕು. ರೈತರ ಗೊಬ್ಬರ, ಬೀಜ ಕಳ್ಳತನ ಮಾಡಿದರೂ ಬಿಗಿ ಕಾನೂನು ಇಲ್ಲ. ಡ್ರಗ್ಸ್ ಮಾಫಿಯಾ ಮಾಡಿದರೂ ಕಠಿಣ ಶಿಕ್ಷೆಯಿಲ್ಲ. ಕಳ್ಳಭಟ್ಟಿ ದಂಧೆಗೂ ಬಿಗಿ ಕಾನೂನು ಇಲ್ಲ. ಇದರಿಂದ ರಾಜ್ಯ ಸಂಪೂರ್ಣ ಕಾನೂನು ಸುವ್ಯವಸ್ಥೆ ಕಳೆದುಕೊಂಡು ಅನೈತಿಕ ಚಟುವಟಿಕೆಗಳಿಂದ ತುಂಬಿದ ರಾಜ್ಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಸರ್ಕಾರ ತನ್ನ ಆಂತರಿಕ ಕಚ್ಚಾಟದಲ್ಲೇ ಮುಳುಗಿದ್ದು, ಅದರಿಂದಾಗಿ ಡ್ರಗ್ಸ್ ಮಾಫಿಯಾದವರು ಆರಾಮಾಗಿ ತಮ್ಮ ದಂಧೆ ನಡೆಸುತ್ತಿದ್ದಾರೆ. ಇದಕ್ಕೆ ತಕ್ಷಣ ಅಂತ್ಯ ಹಾಡದಿದ್ದರೆ ರಾಜ್ಯದ ಭವಿಷ್ಯವೇ ಅಪಾಯಕ್ಕೆ ಸಿಲುಕಲಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಎಚ್ಚರಿಸಿದರು.
ಈ ವೇಳೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
