ಮುಂಡರಗಿ: ಮಣಕವಾಡದ ಮಾಣಿಕ್ಯ,ಪವಾಡ ಪುರುಷ,ನಿರಂಜನ ಜ್ಯೋತಿ, ಶ್ರೀ ಮನಿಪ್ರ ಮೃತ್ಯುಂಜಯ ಮಹಾಸ್ವಾಮಿಗಳ ಜಯಂತ್ಯೋತ್ಸವವು ಗದಗ ಜಿಲ್ಲೆ ಮುಂಡರಗಿ ತಾಲೂಕಿನ, ಹಿರೇವಡ್ಡಟ್ಟಿ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಿತು.
ಜಯಂತ್ಯೋತ್ಸವದ ನಿಮಿತ್ತ, ಸತತ ಏಳು ದಿನಗಳ ಕಾಲ, ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಮಣಕವಾಡದ ಶ್ರೀಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಪ್ರವಚನ ಜರುಗಿತು. ಪ್ರತಿನಿತ್ಯ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಪ್ರವಚನ ಕೇಳಲು ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.
ಸಮಾರಂಭದ ಉದ್ಘಾಟನೆಯನ್ನ ಮುಂಡರಗಿ ಸಂಸ್ಥಾನಮಠದ ಶ್ರೀ ಜಗದ್ಗುರು ನಾಡೋಜ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ನೆರವೇರಿಸಿದರು. ಗದಗನ ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.ಇನ್ನು ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ, ನೂತನವಾಗಿ ನಿರ್ಮಾಣವಾಗಲಿರುವ ಗುರುಭವನದ ಭೂಮಿಪೂಜೆ ನೆರವೇರಿಸಲಾಯಿತು.
ಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ,ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು. ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸದ್ಗುರು ಸಿದ್ಧಾರೂಢ ಮಹಸ್ವಾಮಿಜಿ, ಕೂಡಲದ ಗುರುನಂಜೇಶ್ವರಮಠದ ಮಹೇಶ್ವರ ಶಿವಾಚಾರ್ಯ ಸ್ವಾಮಿಜಿ,ಹಿರೇಮಠದ ವಿರೇಶ್ವರ ಶಿವಾಚಾರ್ಯ ಸ್ವಾಮಿಜಿ,ಹೊಳಲು ವಿರಕ್ತಮಠದ ಚೆನ್ನಬಸವ ದೇವರು ನೇತೃತ್ವ ವಹಿಸಿದ್ದರು.
ರೋಣ ಶಾಸಕರಾದ, ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ನವಲಗುಂದ ಶಾಸಕರಾದ, ಎನ್.ಎಚ್.ಕೋನರೆಡ್ಡಿ,ಕೆಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದ್ದೇವರಮಠ,ಬಿಜೆಪಿ ಮುಖಂಡ ಹೇಮಗಿರೀಶ ಹಾವಿನಾಳ, ಉದ್ದಿಮೆದಾರರಾದ ಹರ್ಲಾಪುರ ಸಹೋದರರು ಸೇರಿದಂತೆ,ದೂರದೂರಿನ ಶ್ರೀಮಠದ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಯಂತ್ಯೋತ್ಸವ ನಿಮಿತ್ತ, ಹಿರೇವಡ್ಡಟ್ಟಿ ಸದ್ಭಕ್ತರಿಂದ ಲಿಂಗೈಕ್ಯ ಮೃತ್ಯುಂಜಯ ಮಹಾಸ್ವಾಮಿಗಳ ಶಿಲಾಮೂರ್ತಿಯ ತುಲಾಭಾರ ಕಾರ್ಯಕ್ರಮ ನೆರವೇರಿತು. ಸಮಾರಂಭದಲ್ಲಿ ಪಾಲ್ಗೊಂಡ, ಶ್ರೀಗಳು ಹಾಗೂ ಶಾಸಕರು ಮೃತ್ಯುಂಜಯ ಸ್ವಾಮಿಗಳ ಪವಾಡಗಳ ಕುರಿತು ಮಾತನಾಡಿದರು.
ಪ್ರತಿನಿತ್ಯವೂ ಕಾರ್ಯಕ್ರಮಕ್ಕೆ ಆಗಮಿಸಿದ ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ವೇಳೆ, ಖ್ಯಾತ ಗಾಯಕಿ ಮಹನ್ಯ ಪಾಟೀಲ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.ಒಟ್ಟಾರೆ ಮಣಕವಾಡ ಅಜ್ಜನವರ ಜಯಂತ್ಯೋತ್ಸವ ನೆಪದಲ್ಲಿ ಸತತ ಏಳುದಿನಗಳ ಕಾಲ ಹಿರೇವಡ್ಡಟ್ಟಿ ಗ್ರಾಮದಲ್ಲಿ ಸರ್ವಧರ್ಮ ಸಹಿಷ್ಣುತೆ, ಧಾರ್ಮಿಕತೆ, ಸಾಹಿತ್ಯ ಸಂಸ್ಕೃತಿಯ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ, ಸದ್ಯದ ಯುವ ಪೀಠಾಧಿಪತಿಗಳಾಗಿರುವ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಶಿಸ್ತು ಹಾಗೂ ಯಶಸ್ವಿ ಕಾರ್ಯಕ್ರಮವಾಗಿ ಸಂಪನ್ನಗೊಂಡಿತು.