ಗದಗ, ಮೇ 23: ರಾಜ್ಯ ಸರ್ಕಾರದ ನಿರ್ಧಾರದಂತೆ ಕೆಲವೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರವು ಮಾಡಲಾಗುತ್ತಿದೆ ಎಂಬ ಚರ್ಚೆಗೆ ಗದಗನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್, “ಜನಔಷಧಿ ಕೇಂದ್ರ ತೆರವು ಮಾಡಲು ರಾಜಕೀಯ ದುರುದ್ದೇಶವಿಲ್ಲ” ಎಂದು ಸ್ಪಷ್ಟನೆ ನಿಡಿದ್ದಾರೆ.
ಗದಗ ನಗರದಲ್ಲಿ ಇಂದು ಪ್ರವಾಸ ಕೈಗೊಂಡಿರುವ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. “ಹಿಂದೆಯೂ ನಾನು ಜನಔಷಧಿ ಕೇಂದ್ರ ಬೇಡ ಅಂತ ಹೇಳಿದ್ದೆ. ಸರ್ಕಾರವೇ ಉಚಿತವಾಗಿ ಔಷಧಿಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ಮಾರಾಟ ಮಳಿಗೆ ಇರಬೇಕೆಂಬ ಅವಶ್ಯಕತೆ ಇಲ್ಲ,” ಎಂದು ತಿಳಿಸಿದ್ದಾರೆ.
ಔಷಧಿಗಳ ಉಚಿತ ವಿತರಣೆ ಮುಂದುವರೆಯಲಿದೆ
“ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಔಷಧಿ ಉಚಿತವಾಗಿ ನೀಡುತ್ತಿದ್ದೇವೆ. ಜನಔಷಧಿ ಕೇಂದ್ರಗಳು ಕಡಿಮೆ ದರದಲ್ಲಿ ಔಷಧಿ ಕೊಡುತ್ತವೆ ಎಂಬ ಒಳ್ಳೆಯ ಉದ್ದೇಶ ಇದ್ದರೂ, ಸರ್ಕಾರವೇ ಉಚಿತವಾಗಿ ನೀಡುತ್ತಿರುವಾಗ, ಸಾಮಾನ್ಯ ಜನರು ಮತ್ತೆ ಖರೀದಿ ಮಾಡಬೇಕಾಗಿರುವ ಪರಿಸ್ಥಿತಿ ಉಂಟಾಗಬಾರದು,” ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ವ್ಯವಸ್ಥೆಯಲ್ಲಿಯೇ ಸುಧಾರಣೆ ಅಗತ್ಯ
ಮೆಡಿಸಿನ್ ಲಭ್ಯವಿಲ್ಲ ಎಂಬ ಕಾರಣಕ್ಕೆ ಜನ ಖಾಸಗಿ ಮಳಿಗೆಗಳಿಗೆ ಧಾವಿಸಬಾರದು ಎಂದು ಹೇಳಿದ ಸಚಿವರು, “ನಮ್ಮ ವ್ಯವಸ್ಥೆ ಎಲ್ಲವನ್ನೂ ಫರ್ಪೆಕ್ಟ್ ಆಗಿ ಕೊಡಲ್ಲ ಅಂತ ಅರ್ಥವಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಬೇಕು. ವ್ಯವಸ್ಥೆಯೊಳಗಿನ ದೋಷಗಳನ್ನು ಸರಿಪಡಿಸಬೇಕು,” ಎಂದು ಸಲಹೆ ನೀಡಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
“ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ದುರಾಶೆಯಿಲ್ಲ. ಈ ತೀರ್ಮಾನ ಸಮಗ್ರವಾಗಿ ಪರಿಗಣಿಸಿ ತೆಗೆದುಕೊಳ್ಳಲಾಗಿದೆ. ಸರಕಾರಿ ಆಸ್ಪತ್ರೆಯ ಆವರಣದ ಹೊರಗೆ ಜನಔಷಧಿ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಬಹುದು. ಆದರೆ ಆಸ್ಪತ್ರೆಯ ಒಳಗೆ ಮಾತ್ರವಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.ಇಂತಹ ನಿರ್ಧಾರಗಳೊಂದಿಗೆ ಆರೋಗ್ಯ ಇಲಾಖೆಯು ಜನರಿಗೆ ಹೆಚ್ಚು ಲಾಭವಾಗುವ ರೀತಿಯಲ್ಲಿ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ಸಚಿವ ಪಾಟೀಲ್ ಸ್ಪಷ್ಟಪಡಿಸಿದರು.
ಪ್ರಹ್ಲಾದ್ ಜೋಶಿ ಮಾರ್ಗದರ್ಶನದಲ್ಲಿ ED ನಡೆಯುತ್ತಿದೆಯಾ?..
ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಂಬಂಧಿತ ಶಿಕ್ಷಣ ಸಂಸ್ಥೆಗಳ ಮೇಲೆ ನಡಿದಿರುವ Enforcement Directorate (ED) ದಾಳಿಗೆ ಸಂಬಂಧಿಸಿದಂತೆ ರಾಜಕೀಯ ಜಟಾಪಟಿಯಲ್ಲಿ ಹೊಸ ಮೊಗ್ಗು ಮೂಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ “ಕಾಂಗ್ರೆಸ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ” ಎಂಬ ಹೇಳಿಕೆಗೆ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾರಾದರೂ ಇಡಿಗೆ ದೂರು ನೀಡಿದ್ರೆ, ಅದು ಜೋಶಿ ಅವರಿಗೆ ಹತ್ತಿರ ಹೋಗಿ ತಲುಪುತ್ತದೆಯಾ? ಇಡಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆಯಾ? ಇಡಿ ದಾಳಿ ಪ್ರಹ್ಲಾದ ಜೋಶಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆಯಾ?” ಎಂದು ತೀವ್ರ ಪ್ರಶ್ನೆ ಎಸಗಿದ್ದಾರೆ.
ಇಡಿಗೆ ಸಂಬಂಧಪಟ್ಟ ವೈಯಕ್ತಿಕ ಮಾಹಿತಿಗಳನ್ನು ಜೋಶಿಯವರು ಮೊದಲೇ ಹೇಗೆ ತಿಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಪ್ರಶ್ನೆ ಎತ್ತಿದ ಅವರು, “ಇಡಿಯು ತಮ್ಮ ವರದಿಗಳನ್ನು ಪ್ರಹ್ಲಾದ ಜೋಶಿ ಅವರಿಗೆ ನೀಡುತ್ತಿದೆಯಾ?” ಎಂಬ ಆರೋಪವನ್ನು ಸರಳವಾಗಿ ಪ್ರಶ್ನಿಸಿದ್ದಾರೆ.

“ಇಡಿಯು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದ್ದು, ಕೇಂದ್ರದ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದೆ. ಜೋಶಿಯವರ ಹೇಳಿಕೆಯೇ ಅದರ ಸಾಕ್ಷಿ,” ಎಂದು ಸಚಿವ ಪಾಟೀಲ ಗಂಭೀರ ಆರೋಪ ಮಾಡಿದರು.
ಗದಗ ಜಿಮ್ಸ್ ಆಸ್ಪತ್ರೆಗೆ ನಾಮಕರಣ ವಿವಾದ..
ಇನ್ನು ಗದಗ ಜಿಲ್ಲೆಯ ಜಿಮ್ಸ್ (JIMS) ಆಸ್ಪತ್ರೆಗೆ ದಿವಂಗತ ಮಾಜಿ ಸಚಿವ ಕೆ.ಎಚ್. ಪಾಟೀಲ್ ಅವರ ಹೆಸರು ನಾಮಕರಣ ಮಾಡಿದ ವಿಚಾರ ಈಗ ರಾಜಕೀಯ ವಿವಾದಕ್ಕೆ ದಾರಿ ಮಾಡಿದೆ. ಜಿಮ್ಸ್ ಆಸ್ಪತ್ರೆಗೆ ಪಂಡಿತ ಪುಟ್ಟರಾಜ ಗವಾಯಿ ಅವರ ಹೆಸರು ಇರಬೇಕೆಂದು ಬಿಜೆಪಿ ಒತ್ತಾಯಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
“ಕೆ.ಎಚ್. ಪಾಟೀಲ್ ಅವರು ರಾಜ್ಯ ರಾಜಕಾರಣದಲ್ಲಿ ಧೀಮಂತ ನಾಯಕರು. ಅವರ ಕೊಡುಗೆ ಅಪಾರ, ಅವರ ಹೆಸರು ಆಸ್ಪತ್ರೆಗೆ ಇಡುವುದು ಅತ್ಯಂತ ಸೂಕ್ತವಾಗಿದೆ,” ಎಂದು ಪಾಟೀಲ್ ಹೇಳಿದ್ದಾರೆ. ಬಿಜೆಪಿಯ ವಿರುದ್ಧ ಕಿಡಿಕಾರಿದ ಅವರು, “ಪಂಡಿತ ಪುಟ್ಟರಾಜ ಗವಾಯಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ಹೆಸರು ಬೇರೆ ಪ್ರಾಮುಖ್ಯತೆಯ ಸಂಸ್ಥೆಗೆ ಇಡಲು ನಾವು ಚಿಂತನೆ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಕಣ್ಣು ತೆರೆದು ನೋಡಬೇಕಾಗಿದೆ. ಇಂತಹ ವಿಷಯದಲ್ಲಿ ರಾಜಕಾರಣ ಮಾಡುವುದು ಕ್ಷುಲ್ಲಕ ರಾಜಕಾರಣವಾಗಿದೆ,” ಎಂದರು.
“ಕೆ.ಎಚ್. ಪಾಟೀಲ್ ಅವರು ಗದಗ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳುವುದು ಸೂಕ್ತವಲ್ಲ. ಬಿಜೆಪಿ ನಿಜಕ್ಕೂ ಜನಪರ ಕೆಲಸ ಮಾಡಬೇಕಾದರೆ, ಇಂತಹ ನಾಮಕರಣದ ವಿಷಯಗಳಲ್ಲಿ ರಾಜಕೀಯ ಮಾಡದೇ ಜನೋಪಯೋಗಿ ಯೋಜನೆಗಳತ್ತ ಗಮನ ಹರಿಸಲಿ,” ಎಂದು ಅವರು ಕಿವಿಮಾತು ಹೇಳಿದರು.
ಮೈಸೂರು ಸ್ಯಾಂಡಲ್ ರಾಯಭಾರಿಯಾಗಿ ತಮನ್ನಾ ನೇಮಕ – ವಿರೋಧದ ಧ್ವನಿ, ನಿರ್ಧಾರ ಹಿಂದಕ್ಕೆ?
ಇನ್ನು ಮೈಸೂರು ಸ್ಯಾಂಡಲ್ ಬ್ರ್ಯಾಂಡ್ನ ಪ್ಯಾನ್ ಇಂಡಿಯಾ ಮಟ್ಟದ ವಿಸ್ತರಣೆಗಾಗಿ ನಟಿ ತಮನ್ನಾ ಭಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಹಲವರಲ್ಲಿ ವಿರೋಧದ ಸ್ವರಕ್ಕೆ ಕಾರಣವಾಗಿದೆ.
ಸ್ಥಳೀಯ ಮಟ್ಟದಲ್ಲಿ ಕನ್ನಡ ನಟರು ಅಥವಾ ನಟಿಯರು ಪ್ರಚಾರ ಮುಖವಾಡರಾಗಬೇಕು ಎಂಬ ಮನೋಭಾವ ರಾಜ್ಯದ ಜನರಲ್ಲಿದೆ. ಆದರೆ, ಇಡೀ ದೇಶದಲ್ಲಿ ಮೈಸೂರು ಸ್ಯಾಂಡಲ್ ಬ್ರ್ಯಾಂಡ್ನ್ನು ಪ್ರಚಾರ ಮಾಡುವ ಉದ್ದೇಶದಿಂದ ಪ್ಯಾನ್ ಇಂಡಿಯಾ ಜನಪ್ರಿಯತೆ ಹೊಂದಿರುವ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ ಮೂಲಗಳ ಪ್ರಕಾರ, “ಯಾರನ್ನೇ ಆಯ್ಕೆ ಮಾಡಿದರೂ ಎಲ್ಲರನ್ನು ತೃಪ್ತಿಪಡಿಸುವುದು ಅಸಾಧ್ಯ. ಜನಪ್ರಿಯ ನಟ/ನಟಿಯ ಬಳಕೆ ಬ್ರ್ಯಾಂಡ್ಗೆ ಹೆಚ್ಚು ಪಾಪ್ಯುಲಾರಿಟಿ ತರಬಹುದು ಎಂಬ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು. ಆದರೂ, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂಬ ಜನಾಭಿಪ್ರಾಯವನ್ನು ನಿರ್ಲಕ್ಷ್ಯ ಮಾಡದೆ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
