ಬೆಂಗಳೂರು: ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಮತ್ತು ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 2025 ರ ಅಂತರಾಷ್ಟ್ರೀಯ ಸಿರಿಧಾನ್ಯ ಹಾಗೂ ವಾಣಿಜ್ಯ ಮೇಳವನ್ನ ಆಯೋಜಿಸಲಾಗಿತ್ತು.
ದೇಶಿ ಬೀಜಗಳ ಸಂರಕ್ಷಣೆ ವಿಷಯದಲ್ಲಿ ಕರ್ನಾಟಕದ ಒಟ್ಟು 15 ಜಿಲ್ಲೆಗಳು ಆಯ್ಕೆಯಾಗಿದ್ದವು. ವಕೀಲರು ಹಾಗೂ ಉಪನ್ಯಾಸಕರಾದ ಮೃತ್ಯುಂಜಯ ವಸ್ತ್ರದ ಅವರು ಗದಗ ಜಿಲ್ಲೆಯನ್ನ ಪ್ರತಿನಿಧಿಸಿದ್ದು ವಿಶೇಷವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ರೈತಸಮೂಹ ಸಂಪದ್ಭರಿತ ಬೆಳೆ ಬೆಳೆದು, ಹರ್ಷದಾಯಕವಾಗಿ ಸುಗ್ಗಿಯ ಹಬ್ಬವನ್ನ ಆಚರಿಸುವ ಮಾದರಿಯನ್ನೇ, ಗದಗನ ಮೃತ್ಯುಂಜಯ ವಸ್ತ್ರದ ಪ್ರದರ್ಶಿಸಿದ್ದು, ರಾಜ್ಯ ಹಾಗೂ ಹೊರ ರಾಜ್ಯ ಸೇರಿದಂತೆ ವಿದೇಶಿಗರ ಗಮನವನ್ನೂ ಸೆಳೆಯಿತು.

ಈ ವೇಳೆ ಮಾತನಾಡಿದ ಮೃತ್ಯುಂಜಯ ವಸ್ತ್ರದ ಅವರು, ಇವತ್ತಿನ ದಿನಮಾನಗಳಲ್ಲಿ ಸಕ್ಕರೆ ಖಾಯಿಲೆ, ರಕ್ತದೊತ್ತಡದಂಥ ಖಾಯಿಲೆಗಳಿಂದ ಅದೆಷ್ಟೋ ಜನರು ಬಳಲುತ್ತಿದ್ದಾರೆ. ಆದರೆ ಪ್ರತಿನಿತ್ಯ ಸಿರಿಧಾನ್ಯಗಳ ಆಹಾರ ಸೇವಿಸುವ ಮೂಲಕ ಆರೋಗ್ಯಯುತ ಜೀವನ ತಮ್ಮದಾಗಿಸಿಕೊಳ್ಳಬಹುದಾಗಿದೆ. ಆದರೆ ಅದನ್ನ ಸೇವಿಸುವ ವಿಧಾನ ಮಾತ್ರ ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ.
ನಾನು ಬೆಳೆದಿರುವ ಕರಿ ಹುರಳಿ, ಕರಿ ಕಡ್ಲಿ, ಕಪ್ಪು ಗೋಧಿ, ಬಕ್ವೀಟ್, ಪೈಗಂಬರ ಗೋಧಿ, ನೇರಳೆ ಗೋಧಿ, ಕರಿ ಹೆಸರು, ಸೌತೆ ಬೀಜ ಹೀಗೆ ವಿಶಿಷ್ಟ ಧಾನ್ಯದ ಬೆಳೆಗಳಲ್ಲಿ ಈಗಾಗಲೇ ನಾನು ನಾಲ್ಕೈದು ಬೆಳೆಗಳನ್ನ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದೇನೆ.ಇವೆಲ್ಲವೂ ಮನಷ್ಯನ ಒಂದಿಲ್ಲೊಂದು ಗಂಭೀರ ಖಾಯಿಲೆಗಳಿಗೆ ರಾಮಬಾಣದ ಬೆಳೆಗಳಾಗಿವೆ.
ಇವತ್ತಿನ ಅತ್ಯಂತ ಕೆಟ್ಟ ಆಹಾರ ಪದ್ಧತಿಯುಳ್ಳ ಸಮಾಜಕ್ಕೆ,ನಾನು ಕೈಲಾದಷ್ಟು ಒಳ್ಳೆಯ ಆಹಾರದ ಪದ್ಧತಿ ಕಲ್ಪಿಸಬೇಕೆಂಬುದು ನನ್ನ ಮೂಲ ಉದ್ದೇಶವಾಗಿದೆ. ರೈತರು ಸಹ ಈ ಕುರಿತು ನನ್ನ ಬಳಿ ಬಂದಲ್ಲಿ, ವಿಶಿಷ್ಟ ಧಾನ್ಯಗಳ ಬೆಳೆ ಕುರಿತು ನಾನು ಅವರಿಗೆ ಪ್ರೋತ್ಸಾಹದಾಯಕವಾಗಿ ಮಾಹಿತಿ ಒದಗಿಸುತ್ತೇನೆ. ಒಟ್ನಲ್ಲಿ ಇಂದಿನ ರೈತರು ಪದೇ ಪದೇ ಒಂದೇ ಬೆಳೆಗಳನ್ನ ಬೆಳೆಯುವ ಬದಲಾಗಿ, ಈ ರೀತಿಯ ವಿದೇಶಿ ತಳಿಗಳ ಬೆಳೆದು, ಆರ್ಥಿಕವಾಗಿ ಹಾಗೂ ಆರೋಗ್ಯಯುತ ಯಶಸ್ಸನ್ನ ಕಾಣಬೇಕಾಗಿದೆ. ಅದಕ್ಕೆ ಸರ್ಕಾರವೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮೃತ್ಯುಂಜಯ ವಸ್ತ್ರದ ಹೇಳಿದರು.
ಇನ್ನು ಗದಗ ಜಿಲ್ಲೆಯಿಂದ ಪ್ರತಿನಿಧಿಸಿದ ಮೃತ್ಯುಂಜಯ ವಸ್ತ್ರದ ಅವರನ್ನ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರಿಂದ ಪ್ರಶಸ್ತಿ ಪತ್ರ ಪಡೆಯುವದರೊಂದಿಗೆ ಕೃಷಿ ಇಲಾಖೆ ಪ್ರತಿನಿಧಿಗಳ ಪ್ರಶಂಸೆಗೆ ಪಾತ್ರರಾದರು.