ಹಾವೇರಿ: ಬಾಲಕನಿಗಾದ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿ ನರ್ಸ್ ಒಬ್ಬರು ಚಿಕಿತ್ಸೆ ನೀಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಕಳೆದ ಜನೆವರಿ 14 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,ಗುರುಕಿಶನ್ ಅಣ್ಣಪ್ಪ ಹೊಸಮನಿ (7 ವರ್ಷ) ಎಂಬ ಬಾಲಕನಿಗೆ ಕೆನ್ನೆ ಮೇಲೆ ಗಾಯ ಆಗಿತ್ತು.ಆಟ ಆಡುವಾಗ ಬಿದ್ದು ಗುರುಕಿಶನ್ ತನ್ನ ಕೆನ್ನೆಗೆ ಗಾಯವಾಗಿ ರಕ್ತ ಸುರಿಯುತ್ತಿತ್ತು. ಕೂಡಲೇ ಬಾಲಕ ಗುರುಕಿಶನ್ ನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆದೊಯ್ದಿದ್ದರು.

ಈ ವೇಳೆ ಆಸ್ಪತ್ರೆಯಲ್ಲಿ ಕರ್ತವ್ಯನಿರತ ನರ್ಸ್ ಜ್ಯೋತಿ ಅನ್ನೋರು,ವಿದ್ಯಾರ್ಥಿಗೆ ಆದ ಗಾಯಕ್ಕೆ ಹೊಲಿಗೆ ಹಾಕೋದು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ಚಿಕಿತ್ಸೆ ನೀಡಿ ಯಡವಟ್ಟು ಮಾಡಿದ್ದಾರೆ.ಇತ್ತ ಬಾಲಕನಿಗೆ ಫೆವಿಕ್ವಿಕ್ ಯಾಕೆ ಹಾಕಿದ್ರಿ ಅಂತ ಕೇಳಿದರೆ ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗ್ತಾ ಇತ್ತು. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ ಎಂದು ನರ್ಸ್ ತಮ್ಮ ಮೊಂಡುತನದ ಉತ್ತರ ನಿಡಿದ್ದಾರೆ.
ಹಾರಿಕೆ ಉತ್ತರ ನೀಡಿದ ನರ್ಸ್ ಜ್ಯೋತಿ
ಇನ್ನೂ ಮುಂದುವರೆದ ನರ್ಸ್, ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ, ನೀವು ಫೆವಿಕ್ವಿಕ್ ಹಚ್ಚಬೇಡಿ ನಾವು ಮುಂದೆ ಹೋಗ್ತೀವಿ ಅಂದಿದ್ದರೆ ಬೇರೆ ಆಸ್ಪತ್ರೆಗೆ ರೆಫರ್ ಮಾಡ್ತಿದ್ವಿ ಎಂದಿದ್ದಾರೆ. ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿರುವದನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿರುವ ಬಾಲಕನ ಪೋಷಕರು, ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ.
ನಂತರ ಈ ಬಗ್ಗೆ ವರದಿ ಪಡೆದು ಕ್ರಮ ಜರುಗಿಸಲು ಮುಂದಾಗಿರುವ ಡಿ.ಹೆಚ್ ಒ ರಾಜೇಶ್ ಸುರಗಿಹಳ್ಳಿ, ನರ್ಸ್ ಜ್ಯೋತಿ ಅವರನ್ನ ಹಾವೇರಿ ತಾಲೂಕು ಗುತ್ತಲ ಆರೋಗ್ಯ ಸಂಸ್ಥೆಗೆ ನಿಯೋಜನೆ ಮಾಡಲು ಆದೇಶ ಹೊರಡಿಸಿದ್ದಾರೆ.ಆದರೆ ಗಾಯಕ್ಕೆ ಫೆವಿಕ್ವಿಕ್ ಹಾಕಿ ನಿರ್ಲಕ್ಷ್ಯ ತೋರಿದರೂ ನರ್ಸ್ ಜ್ಯೋತಿ ಅವರನ್ನ ಅಮಾನತು ಮಾಡಲು ಡಿಹೆಚ್ಓ ಹಿಂದೇಟು ಹಾಕಿದ್ದಾರೆ ಅಂತ ಬಾಲಕನ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಒಂದು ವೇಳೆ ಫೆವಿಕ್ವಿಕ್ನಿಂದ ಏನಾದರೂ ರಿಯಾಕ್ಷನ್ ಆಗಿ ಬಾಲಕನಿಗೆ ಹೆಚ್ಚು ಕಮ್ಮಿಯಾಗಿದ್ದರೆ ಯಾರು ಹೊಣೆ? ಇವತ್ತು ಇವರಿಗೆ ನಾಳೆ ಇನ್ನೊಬ್ಬರಿಗೆ ಏನೇನು ಹಾಕಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಇದು ಆಕಸ್ಮಿಕವಲ್ಲ. ನಿರ್ಲಕ್ಷ್ಯ, ಬೇಜವಾಬ್ದಾರಿತನ. ಹೀಗಾಗಿ ನರ್ಸ್ ಜ್ಯೋತಿಯನ್ನು ಅಮಾನತು ಮಾಡಬೇಕೆಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ.