ಲಕ್ಷ್ಮೇಶ್ವರ: ವರದಕ್ಷಿಣೆ ಪದ್ಧತಿಗೆ ವಿರೋಧ ವ್ಯಕ್ತಪಡಿಸುವ ವಿಭಿನ್ನ ನಡೆ ಒಂದು ಶುಭ ವಿವಾಹ ಸಮಾರಂಭದಲ್ಲಿ ಗಮನ ಸೆಳೆಯಿತು.
ತಾಲೂಕಿನ ಶಿಗ್ಲಿ ಗ್ರಾಮದ ಶ್ರೀ ಶಾಖಾಂಬರಿ ಸಮುದಾಯ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ವರದಕ್ಷಿಣೆಯ ಬದಲು ಶಿಕ್ಷಣೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅರ್ಥಪೂರ್ಣ ಸಂದೇಶ ಸಾರಲಾಯಿತು.
ವರದಿ : ಪರಮೇಶ ಎಸ್ ಲಮಾಣಿ.
ಸವಣೂರು ತಾಲೂಕಿನ ಹೊನ್ನಿಕೊಪ್ಪ ಗ್ರಾಮದ ಕನ್ನಡ ಉಪನ್ಯಾಸಕ ಕವಿ ಶಂಕರ ಬಡಿಗೇರ ಅವರ ವಿವಾಹವು ಸಮಾಜಮುಖಿ ಸಂದೇಶಕ್ಕೆ ವೇದಿಕೆಯಾಯಿತು. ವರದಕ್ಷಿಣೆ ಪದ್ಧತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ ವರನಿಗೆ, ಕನ್ಯೆ ಕಡೆಯಿಂದ ಬೋರ್ಡ್, ಮಾರ್ಕರ್ ಹಾಗೂ ಕನ್ನಡ ನಿಘಂಟುಗಳನ್ನು ಉಡುಗೊರೆಯಾಗಿ ನೀಡಲಾಯಿತು.
ವರನ ಮಾವನವರಾದ ಹುಬ್ಬಳ್ಳಿ ತಾಲ್ಲೂಕಿನ ಮಂಟೂರ ಗ್ರಾಮದ ಎಲ್.ಪಿ.ಎಸ್ ಮುಳ್ಳಳ್ಳಿ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರು ವೀರಪ್ಪ ಬಡಿಗೇರ ಅವರು ವರದಕ್ಷಿಣೆಯ ಬದಲು ಈ ಶಿಕ್ಷಣೋಪಯೋಗಿ ವಸ್ತುಗಳನ್ನು ನೀಡಿದರು.
ಈ ವಿಭಿನ್ನ ನಡೆ, ವರದಕ್ಷಿಣೆ ನಿರ್ಮೂಲನೆಗೆ ಅರ್ಥಪೂರ್ಣ ಸಂದೇಶ ನೀಡುವುದರೊಂದಿಗೆ, ಶಿಕ್ಷಣ ಹಾಗೂ ಕನ್ನಡ ಭಾಷೆಯ ಪ್ರೋತ್ಸಾಹದ ಸಂಕೇತವಾಗಿ ಎಲ್ಲರ ಗಮನ ಸೆಳೆಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧುಗಳು ಹಾಗೂ ಗಣ್ಯರು ಈ ವಿಶಿಷ್ಟ ಉಡುಗೊರೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
