ನವದೆಹಲಿ:76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್ನಲ್ಲಿ ಈ ಬಾರಿ ಇಂಡೋನೇಷ್ಯಾದ ಸೇನೆ ಮತ್ತು ಬ್ಯಾಂಡ್ ತಂಡ ಭಾಗವಹಿಸಲಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.ಅಲ್ಲದೇ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಬಾರಿ ಕರ್ತವ್ಯ ಪಥದಲ್ಲಿ ನಡೆಯುವ ಮೆರವಣಿಗೆಯಲ್ಲಿ 300 ಸಾಂಸ್ಕೃತಿಕ ಕಲಾವಿದರು ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸಂಗೀತ ವಾದ್ಯಗಳ ಮೂಲಕ ‘ಸಾರೆ ಜಹಾನ್ ಸೆ ಅಚ್ಛಾ’ ನುಡಿಸಲಿದ್ದಾರೆ. ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಾಕ್ ಬೀನ್, ಕೊಳಲು, ಕರಡಿ ಮಜಲು, ಮೊಹುರಿ, ಶಂಖ, ತುಟಾರಿ, ಮತ್ತು ಧೋಲ್ ಸೇರಿ ಹಲವು ವಾದ್ಯಗಳ ಮೂಲಕ ಗೀತೆ ಮೊಳಗಲಿದೆ ಎಂದು ಸಚಿವಾಲಯ ತಿಳಿಸಿದೆ.

ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂಡೋನೇಷ್ಯಾದ 160 ಸದಸ್ಯರ ಸೇನಾ ತಂಡ ಮತ್ತು 190 ಸದಸ್ಯರ ಬ್ಯಾಂಡ್ ತಂಡ’ ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್ನಲ್ಲಿ ಭಾಗವಹಿಸಲಿದ್ದು, ಭಾರತೀಯ ಸಶಸ್ತ್ರ ಪಡೆಯ ತಂಡಗಳು ಭಾಗವಹಿಸಲಿವೆ’ ಎಂದರು.
ಈ ವರ್ಷ, 31 ಸ್ಥಬ್ದಚಿತ್ರಗಳ ಮೆರವಣಿಗೆ ನಡೆಯಲಿವೆ. ಇದರಲ್ಲಿ 16 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು 15 ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ ಥೀಮ್ ಅನ್ನು ಪ್ರದರ್ಶಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.