
ಗದಗ: ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆ ಗದಗ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಲಕ್ಷ್ಮಣ ಕರ್ಣಿ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಒಟ್ಟು ₹2.01 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಚಿನ್ನಾಭರಣ ಮತ್ತು ಕಾಗದ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಕರ್ಣಿಗೆ ಸಂಬಂಧಿಸಿದ ಗದಗ ನಗರದ ಆರ್.ಕೆ.ಬಡಾವಣೆಯಲ್ಲಿರು ಮನೆ ಸೇರಿದಂತೆ ಗಜೇಂದ್ರಗಡ, ಹಾವೇರಿಯಲ್ಲಿರುವ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಒಂದು ನಿವೇಶನ, ಒಂದು ವಾಣಿಜ್ಯ ಮಳಿಗೆ, ಮೂರು ವಾಸದ ಮನೆಗಳು, 3.17 ಎಕರೆ ಕೃಷಿ ಜಮೀನು ಸೇರಿದಂತೆ ₹1.75 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ.
ಜತೆಗೆ 3.40 ಲಕ್ಷ ನಗದು, 21.91 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು ಸೇರಿದಂತೆ ಒಟ್ಟು 26.31 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಲೋಕಾಯುಕ್ತ ಎಸ್ಪಿ ಹನುಮಂತ ರೈ, ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ್ ಬಿರಾದಾರ್, ಪಿಎಸ್ಐ ಎಸ್.ಎಸ್.ತೇಲಿ, ಪಿ.ಜಿ.ಕವಟಗಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.