ಗದಗ: ಉದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ತ್ರಿ ಎಮ್ಸ್ (ಮಣಿ, ಮೆನ್ ಹಾಗೂ ಮೆಟೀರಿಯಲ್) ಅವಶ್ಯಕವಾಗಿದೆ. ಮಣಿ ಮತ್ತು ಮೆಟೀರಿಯಲ್ ಲಭ್ಯವಿದೆ, ಆದರೆ ಮೆನ್ರನ್ನು (ಜನಶಕ್ತಿ) ಕೈಗಾರಿಕಾ ಕ್ಷೇತ್ರಕ್ಕೆ ತಂದುಕೊಳ್ಳಬೇಕಿದೆ. ಈ ಮೂರು ಅಂಶಗಳು ಕೈಗಾರಿಕಾ ಕ್ಷೇತ್ರದ ಆಧಾರ ಸ್ತಂಭಗಳೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ ರವಿವಾರ ನಡೆದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ೫೦ನೇ ವರ್ಷದ ಸುವರ್ಣ ಮಹೋತ್ಸವ, ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ಗದಗ ಉತ್ಸವದ ರಜತ ಮಹೋತ್ಸವ ಮತ್ತು ಶ್ರೇಷ್ಠ ವರ್ತಕ-ಉದ್ಯಮಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನನ್ನ ಕಾಲೇಜು ವ್ಯಾಸಂಗದ ದಿನಗಳಲ್ಲಿ ತ್ರಿ ಎಮ್ಸ್ ಬಗ್ಗೆ ತಿಳಿದುಕೊಂಡಿದ್ದೇನೆ. ಉದ್ಯಮ ಮತ್ತು ಕೈಗಾರಿಕೆಗೆ ಇವುಗಳ ಅವಶ್ಯಕತೆ ಅನಿವಾರ್ಯ.ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಬ್ಯಾಂಕರ್ಸ್ ಸಭೆ ನಡೆಸುತ್ತೇನೆ.ಮುಂದಿನ ಬಾರಿ ಆ ಸಭೆಗೆ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿನಿಧಿಗೂ ಆಹ್ವಾನ ನೀಡುತ್ತೇನೆ. ಅಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಬ್ಯಾಂಕರ್ಸ್ ಸಮ್ಮುಖದಲ್ಲಿಯೇ ಬಗೆಹರಿಸಲು ಪ್ರಯತ್ನಿಸುತ್ತೇನೆ”ಎಂದು ಭರವಸೆ ನೀಡಿದರು.
“ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಜೊತೆ ಸ್ಪರ್ಧೆ ನಡೆಸುವುದಕ್ಕಿಂತ ರಾಜಧಾನಿ ಬೆಂಗಳೂರು ವಾಣಿಜ್ಯೋದ್ಯಮ ಸಂಸ್ಥೆಯೊಂದಿಗೆ ಕೈಜೋಡಿಸಿದರೆ ಕೈಗಾರಿಕಾ ಕ್ಷೇತ್ರದಲ್ಲಿ ತ್ವರಿತ ಸಾಧನೆ ಸಾಧ್ಯ. ವ್ಯಾಪಾರ-ವಾಣಿಜ್ಯ ವಿಸ್ತರಣೆಗೆ ರೈಲು ಸಂಪರ್ಕ ಅಗತ್ಯವಾಗಿದ್ದು, ಈಗ ಅದು ದೊರೆತಿದೆ. ಬರುವ ದಿನಗಳಲ್ಲಿ ಗದಗ-ವಾಡಿ, ಯಲವಗಿ-ಗದಗ ಸಂಪರ್ಕಗಳನ್ನು ಮುಂಬೈಗೆ ನೇರ ಹೈಸ್ಪೀಡ್ ರೈಲುಗಳಿಗೆ ಜೋಡಿಸುವ ಕೆಲಸ ನಡೆಯುತ್ತಿದೆ. ಗದಗ-ಯಲವಗಿ ೭೦೦ ಕೋಟಿ ರೂ. ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ”ಎಂದರು.

“ತುಂಗಭದ್ರಾ ನದಿ ಗದಗ ದಡದಲ್ಲೇ ಹರಿಯುತ್ತಿದೆ. ಅದನ್ನು ಬಳಸಿಕೊಳ್ಳುವ ಯೋಚನೆ ಮಾಡಬೇಕು. ವರದಾ ಬೆಡತಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮತಿ ಸಿಗಲಿದೆ ಎಂಬ ವಿಶ್ವಾಸವಿದೆ. ಈ ಯೋಜನೆ ಜಾರಿಗೆ ಬಂದರೆ ಬೇಸಿಗೆಯಲ್ಲೂ ನೀರಿನ ಲಭ್ಯತೆ ಖಚಿತವಾಗಲಿದೆ. ಗದಗ ಜಿಲ್ಲೆಯ ಭೌಗೋಳಿಕ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಕೈಗಾರಿಕೋದ್ಯಮಿಗಳು ಕಾರ್ಯನಿರ್ವಹಿಸಿದರೆ ಗುರಿ ತಲುಪಿ ಯಶಸ್ಸು ಸಾಧಿಸಲು ಸಾಧ್ಯ. ಈ ಸಾಧನೆಗೆ ಸಿಂಹಾವಲೋಕನ ಮತ್ತು ಆತ್ಮಾವಲೋಕನ ಎರಡೂ ಅಗತ್ಯ” ಎಂದು ಬೊಮ್ಮಾಯಿ ಹೇಳಿದರು.
“ವ್ಯಕ್ತಿಯೊಬ್ಬನು ೫೦ ವರ್ಷ ಬದುಕುವುದು ಸಾಮಾನ್ಯ, ಆದರೆ ಒಂದು ಸಂಸ್ಥೆ ೫೦ ವರ್ಷಗಳ ಕಾಲ ಯಶಸ್ವಿಯಾಗಿ ಸಾಗುವುದು ದೊಡ್ಡ ಸಾಧನೆ. ಆ ಅನುಭವವನ್ನು ಹೊತ್ತು ಸಾಗುತ್ತಿರುವ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಾಧನೆ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ವಿತರಣೆ ಸಮಾರಂಭ ಜರುಗಿತು.
ಪ್ರಶಸ್ತಿ ಪುರಸ್ಕೃತರು
ಈ ಸಂದರ್ಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದವರು ಚಂದ್ರು ಬಾಳಿಹಳ್ಳಿಮಠ.
ಶ್ರೇಷ್ಠ ಉದ್ಯಮಿ: ಅಶೋಕ ಶಿದ್ಲಿಂಗ್, ಬಾಳಪ್ಪ ಕುಂಬಾರ.
ಶ್ರೇಷ್ಠ ವರ್ತಕ: ನಾಗನಾಥ ಜೋಶಿ, ರಮೇಶಕುಮಾರ ಜೈನ್, ಕಾಶೀನಾಥ ಅಳವುಂಡಿ (ಮುಂಡರಗಿ).
ಇತರ ಪುರಸ್ಕೃತರು: ಜೀವಂದರ ಗೋಗಿ, ಮಹಾದೇವಗೌಡ ಲಿಂಗನಗೌಡ್ರ, ಸಂಗಪ್ಪ ಗೋವೇಶ್ವರ.
ಮಹಿಳಾ ಉದ್ಯಮಿಗಳು: ಪಾರ್ವತಿ ಪಶುಪತಯ್ಯ ಶಾಬಾದಿಮಠ, ಪೂರ್ಣಿಮಾ ಕೃಷ್ಣ ಆಟದ, ಗಂಗಾಧರ ಪಾಟೀಲ್, ಅಶೋಕ ಹಬೀಬ.

ವಿಶೇಷ ಸಾನಿಧ್ಯ
ಕಾರ್ಯಕ್ರಮದಲ್ಲಿ ತೋಂಟದಾರ್ಯ ಸಂಸ್ಥಾನಮಠದ ಮ.ನಿ.ಪ್ರ. ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಭಾಗವಹಿಸಿದ ಗಣ್ಯರು
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ರಾಜ್ಯಾಧ್ಯಕ್ಷ ಎಂ.ಜಿ. ಬಾಲಕೃಷ್ಣ, ಚೇರ್ಮನ್ ಆನಂದ ಪೋತ್ನಿಸ್, ಕೋ-ಚೇರ್ಮನ್ ಸದಾಶಿವಯ್ಯ ಮದರಿಮಠ, ಸಂಗಯ್ಯ ಗಣಾಚಾರಿ, ಜಿ.ವಿ. ಕುಷ್ಟಗಿ, ಎಚ್.ವಿ. ಶಾನಭೋಗರ, ಅಶೋಕ ನಿಲೂಗಲ್, ಚಂದ್ರು ಬಾಳಿಹಳ್ಳಿಮಠ, ತೋಂಟೇಶ ಕುರಡಗಿ, ದೇವದಾಸ ಕಾಮತ, ಮಲ್ಲಿಕಾರ್ಜುನ ಸುರಕೋಡ, ಶೇಖಣ್ಣ ಗದ್ದಿಕೇರಿ, ಶರಣಬಸಪ್ಪ ಕುರಡಗಿ, ಬಾಲಚಂದ್ರ ಭರಮಗೌಡ್ರ, ಮೋಹನ ಕೋಟಿ, ಸಂಗಮೇಶ ದುಂದೂರ, ದತ್ತುದಾಸ ಪುಣೇಕರ, ರಾಮನಗೌಡ ದಾನಪ್ಪಗೌಡ್ರ, ಮದುಸೂಧನ ಪುಣೇಕರ, ಶರಣಬಸಪ್ಪ ಗುಡಿಮನಿ ಉಪಸ್ಥಿತರಿದ್ದರು.
ಬಾಹುಬಲಿ ಜೈನರ್ ಕಾರ್ಯಕ್ರಮವನ್ನು ನಿರೂಪಿಸಿದರು.
