ನವದೆಹಲಿ: 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಹಾ ಕುಂಭಮೇಳವನ್ನು ಪ್ರದರ್ಶಿಸಿದ ಉತ್ತರ ಪ್ರದೇಶದ ಟ್ಯಾಬ್ಲೋ ಪ್ರಥಮ ಬಹುಮಾನವನ್ನು ಗಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡನೇ ಬಹುಮಾನವನ್ನು ತ್ರಿಪುರ ಗೆದ್ದರೆ, ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದುಕೊಂಡಿದೆ.
ಇನ್ನು MyGov ನಲ್ಲಿ ಸಾರ್ವಜನಿಕ ಮತಗಳ ಪ್ರಕಾರ, ಗುಜರಾತ್ನ ಟ್ಯಾಬ್ಲೊ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಮೂರು ರಕ್ಷಣಾ ದಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಅತ್ಯುತ್ತಮ ಪಥಸಂಚಲನ ನಡೆಸಿದ ತಂಡ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಆತ್ಮನಿರ್ಭರ ಭಾರತದ ಅಡಿಯಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಸಿದ್ಧಪಡಿಸಿ ಬಳಕೆ ಮಾಡುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಉದ್ದೇಶದ ತ್ರಿಪುರಾ ಸ್ತಬ್ಧಚಿತ್ರಕ್ಕೆ 2 ನೇ ಬಹುಮಾನ ಲಭಿಸಿದೆ. ಆಂಧ್ರಪ್ರದೇಶ ಸರ್ಕಾರವು ಪರಿಸರ ಸ್ನೇಹಿ ಮರದ ಆಟಿಕೆಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸಿತ್ತು. ಇದು ಮೂರನೇ ಬಹುಮಾನಕ್ಕೆ ಭಾಜನವಾಗಿದೆ.
ಕೇಂದ್ರ ಸಚಿವಾಲಯ ಹಾಗೂ ಇಲಾಖೆಗಳ ವಿಭಾಗದಲ್ಲಿ ಆದಿವಾಸಿ ಕಲ್ಯಾಣ ಸಚಿವಾಲಯದ ಸ್ತಬ್ಧಚಿತ್ರ ಪ್ರಥಮ ಬಹುಮಾನ ಪಡೆದಿದೆ. ಹಾಗೆಯೇ ಪಥ ಸಂಚಲನದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ದೆಹಲಿ ಪೊಲೀಸ್ ತಂಡವು ಬಹುಮಾನ ಪಡೆದಿವೆ.
ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳು 76ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಪಾಲ್ಗೊಂಡಿದ್ದವು. ಇವುಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಲು ಮೂವರು ತೀರ್ಪುಗಾರರನ್ನೊಳಗೊಂಡ ತಂಡವನ್ನು ರಕ್ಷಣಾ ಸಚಿವಾಲಯ ರಚಿಸಿತ್ತು. ಇದರೊಂದಿಗೆ ಆನ್ಲೈನ್ ಮೂಲಕ ಮತ ಹಾಕಲು ಸಾರ್ವಜನಿಕರಿಗೆ 2 ದಿನಗಳ ಅವಕಾಶ ನೀಡಲಾಗಿತ್ತು.
ಸಾರ್ವಜನಿಕರ ಮೆಚ್ಚಿನ ಸ್ತಬ್ಧಚಿತ್ರ ವಿಭಾಗದಲ್ಲಿ ಗುಜರಾತ್ ಮೊದಲ ಬಹುಮಾನ ಪಡೆದಿದೆ. 2ನೇ ಹಾಗೂ ಮೂರನೇ ಬಹುಮಾನವು ಕ್ರಮವಾಗಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡಕ್ಕೆ ಲಭಿಸಿದೆ. ಸಿಆರ್ಪಿಎಫ್ಗೆ ಅತ್ಯುತ್ತಮ ಪಥ ಸಂಚಲನ ತಂಡ ಹಾಗೂ ಸಚಿವಾಲಯದ ಸ್ತಬ್ಧಚಿತ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಬಹುಮಾನ ಪಡೆದಿವೆ.
ಕರ್ನಾಟಕದಿಂದ “ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು” ಟ್ಯಾಬ್ಲೋ.
ಇನ್ನು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಗದಗ ಜಿಲ್ಲೆಯ ಐತಿಹಾಸಿಕ ಸ್ಥಳವಾಗಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿತ್ತು.
ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ರಾಜ್ಯದ ಸ್ತಬ್ಧಚಿತ್ರವನ್ನು ಓಟ್ ಮಾಡಿ ಬೆಂಬಲಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಮನವಿ ಮಾಡಿದ್ದರು.
ಕೇಂದ್ರ ಸರ್ಕಾರವು ಅತ್ಯುತ್ತಮ ಸ್ತಬ್ಧಚಿತ್ರದ ಆಯ್ಕೆಗಾಗಿ ಸಾರ್ವಜನಿಕರು ಆನ್ ಲೈನ್, ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಓಟ್ ಮಾಡಲು ಅವಕಾಶ ಕಲ್ಪಿಸಿತ್ತು. ಜನವರಿ 28ರ ಮಧ್ಯರಾತ್ರಿ 12ರ ವರೆಗೆ ಓಟ್ ಮಾಡಲು ಅವಕಾಶವಿತ್ತು.