ಐತಿಹಾಸಿಕ ಲಕ್ಕುಂಡಿಯಲ್ಲಿ ಪ್ರತಿವರ್ಷ ಲಕ್ಕುಂಡಿ ಉತ್ಸವವನ್ನು ಆಚರಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಆಗ್ರಹಿಸಿದ್ದಾರೆ. ಲಕ್ಕುಂಡಿಯ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಕ್ಕುಂಡಿಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಉತ್ಸವ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ವರದಿ:ಮಹಲಿಂಗೇಶ ಹಿರೇಮಠ.ಗದಗ
ಅವಿಭಜಿತ ಧಾರವಾಡ ಜಿಲ್ಲೆಯ ಅವಧಿಯಲ್ಲಿ ಲಕ್ಕುಂಡಿ ಉತ್ಸವ ನಡೆಯಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಧಾರವಾಡ ಉತ್ಸವ ನಡೆಸಬೇಕಾಯಿತು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಬಳಿಕ ಲಕ್ಕುಂಡಿಯಲ್ಲಿ ಉತ್ಸವ ಆಯೋಜಿಸಲಾಗಿತ್ತು ಎಂದು ಅವರು ನೆನಪಿಸಿಕೊಂಡರು. ಆದರೆ ಪ್ರತಿ ವರ್ಷ ನಿರಂತರವಾಗಿ ಲಕ್ಕುಂಡಿ ಉತ್ಸವ ನಡೆಯದೇ ಇರುವುದು ವಿಷಾದಕರ ಸಂಗತಿಯಾಗಿದೆ ಎಂದರು.
ಉತ್ಸವದಿಂದ ಲಕ್ಕುಂಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಲಾಭವಿದೆ. ಬರ ತೊಂದರೆ, ರಸ್ತೆ ಸಮಸ್ಯೆ, ಪ್ರವಾಸೋದ್ಯಮದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಉತ್ಸವದ ಮೂಲಕ ಸರ್ಕಾರದ ಗಮನಕ್ಕೆ ಬರುತ್ತವೆ. ಇತರ ಜಿಲ್ಲೆಗಳಿಗೆ ಲಕ್ಕುಂಡಿ ಉತ್ಸವ ಮಾದರಿಯಾಗಬೇಕು. ಪ್ರತಿವರ್ಷ ಲಕ್ಕುಂಡಿ ಉತ್ಸವ ನಡೆಸಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ ಎಂದು ಹೇಳಿದರು.
ರೈತರ ಸಮಸ್ಯೆಗಳಿಗೆ ಸರ್ಕಾರ ನಿರ್ಲಕ್ಷ್ಯ
ಸರ್ಕಾರ ರೈತರ ಸಮಸ್ಯೆ ಬಗೆಹರಿಸಲು ಯಾವುದೇ ಚಿಂತನೆ ಮಾಡುತ್ತಿಲ್ಲ. ರೈತರು ಬೆಳೆದ ಬೆಳೆಗಳನ್ನು ಸರ್ಕಾರ ತಕ್ಷಣ ಖರೀದಿಸಬೇಕು. ಆದರೆ ಮೂರು ತಿಂಗಳ ಬಳಿಕ ಹಣ ಪಾವತಿಸಲಾಗುತ್ತಿದೆ. ಸರ್ಕಾರ ಇರುವವರೆಗೂ ರೈತರ ಹಣ ಕೊಡಲ್ಲ ಎಂಬ ಭಾವನೆ ಆಡಳಿತದಲ್ಲಿದೆ ಎಂದು ಟೀಕಿಸಿದರು.
ಹಿಂದಿನ ಸರ್ಕಾರಗಳ ಆಡಳಿತ ನೆನಪಿಸಿಕೊಂಡ ಪಾಟೀಲ
ಮೊರಾರ್ಜಿ ದೇಸಾಯಿ ಸರ್ಕಾರ ಇದ್ದಾಗ ಬೇರೆ ದೇಶಗಳಿಂದ ಹಣ ತರಿಸಿ ಸರ್ಕಾರ ನಡೆಸಲಾಗಿತ್ತು. ಆಗ ಬ್ಯಾಂಕ್ಗಳಲ್ಲಿ 250 ಕೋಟಿ ರೂಪಾಯಿ ಸಾಲ ಪಡೆದು ನೌಕರರಿಗೆ ವೇತನ ನೀಡಲಾಗಿತ್ತು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಅಂಥ ಕಷ್ಟದ ಪರಿಸ್ಥಿತಿಯಲ್ಲೂ ನಾವು ಸರ್ಕಾರವನ್ನು ಸಮರ್ಥವಾಗಿ ನಡೆಸಿದ್ದೇವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿ
ಮೋದಿ ಆಗಲಿ, ಯಾರೇ ಆಗಲಿ ಯಾರಿಗೂ ಗ್ಯಾರಂಟಿ ಯೋಜನೆಗಳು ಇಷ್ಟವಿಲ್ಲ. ಆದರೆ ಈಗ ಗ್ಯಾರಂಟಿ ಹೆಸರಿನಲ್ಲಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಮೊದಲು ನಾನು ಬಿಗಿಯಾಗಿದ್ದೆ, ಈಗ ಸಡಿಲ ಆಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ. ನಾನು ಅವರಿಗೆ ಸಡಿಲ ಆಗಬೇಡಿ, ಬಿಗಿಯಾಗಿಯೇ ಇರಬೇಕು ಎಂದು ಹೇಳಿದ್ದೇನೆ ಎಂದರು.
ವೋಟಿಗಾಗಿ ಏನು ಬೇಕಾದರೂ ಮಾಡಲು ಸರ್ಕಾರ ಸಿದ್ಧವಾಗಿದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾದರೆ ಸಂವಿಧಾನ ತಿದ್ದುಪಡಿ ತರಲಿ. ಇಲ್ಲದಿದ್ದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಹೋಗಲಿದೆ ಎಂದು ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳ ಪರಿಣಾಮಗಳ ಕುರಿತು ಆತಂಕ
ಅಕ್ಕಿಯನ್ನು ಉಚಿತವಾಗಿ ಎಷ್ಟು ದಿನ ನೀಡಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಗೃಹ ಲಕ್ಷ್ಮೀ ಯೋಜನೆಯ ಹಣದಿಂದ ಕೆಲವರು ಕುಡಿತದ ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಮಹಿಳೆಯರು ಬೇಸತ್ತಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಕಾರಣದಿಂದ ಯಾರಿಗೂ ನೌಕರಿ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರಿಗೂ ಗುತ್ತಿಗೆ ಆಧಾರದ ಮೇಲೆಯೇ ಉದ್ಯೋಗ ನೀಡಲಾಗುತ್ತಿದೆ. ಕಸ್ತೂರೆವ್ವಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಜಾನೆ ಭದ್ರವಾಗಿದ್ದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಲಕ್ಕುಂಡಿ ರಸ್ತೆ ಅಭಿವೃದ್ಧಿ ಕುರಿತು ಪ್ರಸ್ತಾಪ
ನಾನು ಕೇಂದ್ರ ಸಾರಿಗೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಅವರನ್ನು ಲಕ್ಕುಂಡಿ ಉತ್ಸವಕ್ಕೆ ಕರೆತಂದಿದ್ದೆ. ಆ ವೇಳೆ ಲಕ್ಕುಂಡಿಯ ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದೆ. ಅದರಿಂದ ರಸ್ತೆಗಳು ನಿರ್ಮಾಣವಾಗಿದ್ದವು. ಆದರೆ ಈಗ ಆ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರ ಆರ್ಥಿಕ ಶಿಸ್ತು ನೆನಪಿಸಿದ ಮಾಜಿ ಸಚಿವ
ಧಾರವಾಡದಲ್ಲಿ ಏರ್ಕಂಡಿಷನರ್ ಬಳಸಿದ್ದ ಅಧಿಕಾರಿಯನ್ನು ಸಿದ್ದರಾಮಯ್ಯ ಗದರಿಸಿದ್ದರು. ಅಧಿಕಾರಿಯ ವೇತನದಿಂದ ಹಣ ಕಡಿತ ಮಾಡುವುದಾಗಿ ಎಚ್ಚರಿಸಿದ್ದರು. ಆರ್ಥಿಕ ಶಿಸ್ತು ಬಗ್ಗೆ ಅಂದಿನ ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಂಡ ಪಾಟೀಲ, ಈಗಲೂ ಅವರು ಹಾಗೆಯೇ ಇದ್ದಾರೆ. ಆದರೆ ಈಗ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸಹಾಯಕ್ಕೆ ಆಗ್ರಹ
ಪ್ರಜ್ವಲ್ ರಿತ್ತಿಗೆ ಎಷ್ಟು ಹಣ ಕೊಟ್ಟರೂ ಕಡಿಮೆ. ಆ ಕುಟುಂಬಕ್ಕೆ ಬೇಕಾದ ಎಲ್ಲ ಸಹಾಯವನ್ನು ಸರ್ಕಾರ ಒದಗಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
