ಗದಗ: ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಿ ಒಳಮಿಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಸಿಎಂ ಸಿದ್ಧರಾಮಯ್ಯನವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.
ಗದಗ ಜಿಲ್ಲೆ ರೋಣ ಪಟ್ಟಣಕ್ಕೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಮನವಿ ಸ್ವೀಕರಿಸಿದರು.
ಪರಿಶಿಷ್ಟ ಜಾತಿ ಪಂಗಡಗಳಲ್ಲಿ ಒಳಮೀಸಲಾತಿ ಕಲ್ಪಿಸಲು ಆಯಾಯ ರಾಜ್ಯಗಳಿಗೆ ಅಧಿಕಾರ ಇದೆಯೆಂದು ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಹೊರಬಂದಿರುವುದು ತುಳಿತಕ್ಕೊಳಗಾದ ಶೋಷಿತ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಒಂದು ರಹದಾರಿಯಾಗಿದೆ.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಈ ಹೋರಾಟದಲ್ಲಿ ಹಲವರು ತಮ್ಮ ಬದುಕನ್ನು ತ್ಯಾಗ ಮಾಡಿದ್ದರೆ ಮತ್ತೆ ಕೆಲವರು ಪ್ರಾಣತ್ಯಾಗ ಮಾಡಿರುತ್ತಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಉಳಿದ 6 ಜನ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರಶರ್ಮ ಒಳಗೊಂಡಂತೆ 6:1ರ ಅನುಪಾತದಲ್ಲಿ ಪರಿಶಿಷ್ಟ ಜಾತಿಗಳಿಗೆ ಉಪವರ್ಗೀಕರಣ ಮಾಡಬಹುದೆಂದು ಆಯಾಯಾ ರಾಜ್ಯಗಳಿಗೆ ತೀರ್ಪನ್ನು ನೀಡಿರುತ್ತಾರೆ.
ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸದಾಶಿವ ಆಯೋಗವನ್ನು ರಚಿಸಿ ನ್ಯಾ. ಸದಾಶಿವರವರ ನೇತೃತ್ವದಲ್ಲಿ ಸತತ 7 ವರ್ಷಗಳ ಕಾಲ 20 ಲಕ್ಷದ 54 ಸಾವಿರ ಕುಟುಂಬಗಳನ್ನು ವೈಜ್ಞಾನಿಕ ಸಮೀಕ್ಷೆಗೊಳಪಡಿಸಿ ನಂತರ 2012ರಲ್ಲಿ ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಸದಾನಂದಗೌಡರಿಗೆ ಸಲ್ಲಿಸಿತು.
ಪರಿಶಿಷ್ಟರ ನೂರೊಂದು ಜಾತಿಗಳಲ್ಲಿ ಮಾದಿಗ-ಮಾದಿಗ ಸಹಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ಹೊಲೆಯ ಸಹಸಂಬಂಧಿತ ಜಾತಿಗಳಿಗೆ ಶೇ.5ರಷ್ಟು ಸ್ಪೃಶ್ಯ ಜಾತಿಗಳಾದ ಕೊರಮ, ಕೊರಚ, ಬೋವಿ, ಲಂಬಾಣಿಗಳಿಗೆ ಶೇ.3ರಷ್ಟು, ಅಲೆಮಾರಿ ಅಸ್ಪೃಶ್ಯ ಜಾತಿಗಳಿಗೆ ಶೇ.1ರಷ್ಟನ್ನು ಜನಸಂಖ್ಯಾ ಆಧಾರಿತವಾಗಿ ಒಳಮೀಸಲಾತಿ ಕಲ್ಪಿಸಿದೆ.
ಸುಪ್ರೀಂಕೋರ್ಟ್ ಆಗಸ್ಟ್ 1. 2024 ರಂದು ನೀಡಿದ ಆದೇಶದನ್ವಯ ಕರ್ನಾಟಕ ಸರ್ಕಾರವು ದಿನಾಂಕ: 28.10.2024ರಂದು ಸಚಿವ ಸಂಪುಟ ಸಭೆಯಲ್ಲಿ ಎಂಪೇರಿಕಲ್ ಡಾಟಾ ಸಂಗ್ರಹ ಮಾಡಲು ಏಕಸದಸ್ಯ ಆಯೋಗವನ್ನು ರಚಿಸಿ ನಿವೃತ್ತ ನ್ಯಾ ಹೆಚ್.ಎನ್.ನಾಗಮೋಹನದಾಸ್ ಅವರನ್ನು ಆಯೋಗಕ್ಕೆ ನೇಮಿಸಿತು.
ಮುಂದುವರೆದು ಹೊರಡಿಸಿದ್ದು ಈ ಕಾರ್ಯಸೂಚಿಗೆ ತಕ್ಕಂತೆ ನಾವು ನಮ್ಮ ಸಮಾಜವನ್ನು ಸಿದ್ದಗೊಳಿಸಿ ಆಯೋಗಕ್ಕೆ ತಕ್ಕ ಸಮಂಜಸ ಮಾಹಿತಿ ಒದಗಿಸಲು ತುರ್ತಾಗಿ ಸಜ್ಜಾಗಬೇಕಾಗಿದೆ. ಮಹತ್ತರ ಉದ್ದೇಶದ ಹಿನ್ನೆಲೆಯಿಂದ ಮಾದಿಗ ಸಮಾಜವನ್ನು ಜಾಗೃತಿಗೊಳಿಸಿ, ಒಳಮೀಸಲಾತಿಯನ್ನು ಸರ್ಕಾರ ಅತೀ ಶೀಘ್ರವಾಗಿ ಜಾರಿಗೊಳಿಸಲು ಸನ್ನದ್ಧಗೊಳಿಸುವ ಸಲುವಾಗಿ ಗದಗ ಜಿಲ್ಲೆಯ ತುತ್ತತುದಿಯವರೆಗೂ ಒಳಮೀಸಲಾತಿಯನ್ನು ಪಡೆಯುವ ಸಲುವಾಗಿ ಮನವಿ ಸಿಎಂ ಅವರಿಗೆ ಮನವಿ ನೀಡಲಾಯಿತು.
ಈ ವೇಳೆ, ರಾಜ್ಯ ಸಂಘಟನಾ ಸಂಚಾಲಕರಾದ, ಎಸ್.ಎನ್.ಬಳ್ಳಾರಿ, ಗದಗ ಜಿಲ್ಲಾ ಸಂಚಾಲಕರಾದ, ದುರಗಪ್ಪ ಎಲ್ ಹರಿಜನ, ರಾಜ್ಯ ವಿಭಾಗೀಯ ಸಂಚಾಲಕರಾದ,ಪ್ರಕಾಶ ಎಮ್.ಹೊಸಳ್ಳಿ,ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕರಾದ,ಶರಣು ಪೂಜಾರ ಸೇರಿದಂತೆ ಅನೇಕರು ಇದ್ದರು.