ರೋಣ: ಗ್ರಾಮಸ್ಥರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಜ್ಞಾನ ವೃದ್ದಿ ಮಾಡಿಕೊಳ್ಳಿ, ಶಾಲಾ ಮಕ್ಕಳು ಪುಸ್ತಕ ಗೂಡನ್ನು ಹೆಚ್ಚು ಸದುಪಯೋಗ ಪಡೆಯುವಂತೆ ಸಲಹೆ ನೀಡುವ ಮೂಲಕ ಪುಸ್ತಕ ಗೂಡನ್ನು ಶಾಸಕ ಜಿ ಎಸ್ ಪಾಟೀಲ ಲೋಕಾರ್ಪಣೆ ಗೊಳಿಸಿದರು.
ಗದಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯತಿ ಕೇಂದ್ರದ ಆವರಣದಲ್ಲಿರುವ ಬಸ್ ನಿಲ್ದಾಣದಲ್ಲಿ ತಾಲೂಕ ಪಂಚಾಯತಿ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ವತಿಯಿಂದ *ಪುಸ್ತಕ ಗೂಡು* ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸಲು ಪ್ರಯತ್ನಿಸಲಾಗುವುದು. ಓದುಗರಿಗೆ ತನ್ನ ವಾಸಸ್ಥಾನದಲ್ಲಿಯೇ ಒಂದು ವೇದಿಕೆ ಕಲ್ಪಿಸುವುದಕ್ಕಾಗಿ ಈ ಕಾರ್ಯಕ್ರಮ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿದೆ ಎಂದರು.
ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಮಾತನಾಡಿ, ಬಸ್ ನಿಲ್ದಾಣಗಳಲ್ಲಿ, ಉದ್ಯಾನಗಳಲ್ಲಿ, ಸಾರ್ವಜನಿಕ ಕಚೇರಿಗಳಲ್ಲಿ ಜನರ ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಲಿ ಎಂಬ ಧ್ಯೇಯ ದೊಂದಿಗೆ ಈ ಪುಸ್ತಕ ಗೂಡುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕಥೆ, ಕಾದಂಬರಿ, ನಿಯತಕಾಲಿಕೆಗಳಿದ್ದು, ಲಭ್ಯವಿರುವ ಪುಸ್ತಕಗಳನ್ನು ಓದುವ ಇಲ್ಲವೇ ಮನೆಗೆ ತೆಗೆದುಕೊಂಡು ಓದಿ ಮರಳಿ ಗೂಡಿಗೆ ತಂದಿಡಲು ಅವಕಾಶವಿದೆ.
ಇದು ಜನರಿಗೆ ಓದುವ ಹವ್ಯಾಸ ಮೂಡಿಸುವ ಉತ್ತಮ ಪರಿಕಲ್ಪನೆಯಾಗಿದೆ. ಜತೆಗೆ ಎಲ್ಲ ವಯೋಮಾನದ ಓದುಗರಿಗೆ ಆಸಕ್ತಿದಾಯಕವಾಗುವಂತೆ ಪುಸ್ತಕದ ಗೂಡು ವೇದಿಕೆ ಏರ್ಪಡಿಸುವ ಉದ್ದೇಶ ಒಳಗೊಂಡಿದೆ. ಅತಿ ಕಡಿಮೆ ವೆಚ್ಚದಲ್ಲಿ ಬೆಲೆ ಕಟ್ಟಲಾಗದ ಜ್ಞಾನವನ್ನು ಹಂಚುವ ಕಾರ್ಯ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ವ್ಯಾಪ್ತಿಯ 22 ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಪಿಡಿಒ ಶಿವಯೋಗಿ ರಿತ್ತಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.