ಕೊಪ್ಪಳ: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಆರಂಭಕ್ಕೆ ಕೊಪ್ಪಳ ಜನತೆ ವಿರೋಧ ವ್ಯಕ್ತಪಡಿಸಿದ್ದು ತಮಗೆಲ್ಲಾ ಗೊತ್ತಿರೋ ವಿಚಾರ.ಅದರಲ್ಲೂ ಇತ್ತೀಚೆಗೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ರಾಜಕೀಯ ನಾಯಕರು ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಮಧ್ಯೆ ನಿನ್ನೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಬಳಿ ಕೊಪ್ಪಳ ಜಿಲ್ಲಾ ಜನಪ್ರತಿನಿಧಿಗಳ ನಿಯೋಗ ತೆರಳಿ ಕಾರ್ಖಾನೆ ಪ್ರಾರಂಭಿಸುವದು ಬೇಡ ಎಂದು ಮನವರಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ನಿನ್ನೆ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈವರೆಗೂ ಕಾರ್ಖಾನೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸಿಎಂ ಸೂಚನೆಗೂ ಬಲ್ಡೋಟ ಆಡಳಿತ ಮಂಡಳಿ ಡೋಂಟ್ಕೇರ್ ಎಂದಿದೆ.

ಕೊಪ್ಪಳ ನಗರ ಬಳಿ ಬೃಹತ್ ಸ್ಟೀಲ್ ಫ್ಯಾಕ್ಟರಿ ನಿರ್ಮಾಣವಾಗುತ್ತಿದೆ. ಆದರೆ ಕೊಪ್ಪಳದ ಜನರು ಸ್ಟೀಲ್ ಫ್ಯಾಕ್ಟರಿ ಆರಂಭಿಸದಂತೆ ಒತ್ತಾಯಿಸಿದ್ದರು. ಹಾಗಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದ ಜನಪ್ರತಿನಿಧಿಗಳ ನಿಯೋಗ ಮನವಿ ಮಾಡಿತ್ತು. ಈ ವೇಳೆ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ಗೆ ಕರೆ ಮಾಡಿದ್ದ ಸಿಎಂ ಫ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದ್ದರು. ಆದರೆ ಇತ್ತ ಕಾಮಗಾರಿ ಮಾತ್ರ ಸ್ಥಗಿತವಾಗಿಲ್ಲ.
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಕಣ್ಣೀರಿಟ್ಟಿದ್ದ ಗವಿಶ್ರೀ
ಕೊಪ್ಪಳ ಜಿಲ್ಲಾಡಳಿತದ ನಡೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಫ್ಯಾಕ್ಟರಿಗೆ ಹೋಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ಡಿಸಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಡಿಸಿದ್ದು, ಬಲ್ಡೋಟ ಫ್ಯಾಕ್ಟರಿಯೊಳಗೆ ಹೋಗಲು ಬಿಡದ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರ ಮಧ್ಯೆ ವಾಗ್ವಾದ ಉಂಟಾಗಿದೆ.
ಫ್ಯಾಕ್ಟರಿ ನಿರ್ಮಾಣಕ್ಕೆ ಬಲ್ಡೋಟಾ ಸಂಸ್ಥೆ 54 ಸಾವಿರ ಕೋಟಿ ರೂ ಬಂಡವಾಳ ಹೂಡಿಕೆ ಮಾಡುತ್ತಿದೆ. ವರ್ಷಕ್ಕೆ 10.50 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಬಲ್ಡೋಟಾ ಫ್ಯಾಕ್ಟರಿ ಆರಂಭದಿಂದ ಜನರಿಗೆ ತೊಂದರೆ ಆಗಲಿದೆ. ಈಗಾಗಲೇ ಕೊಪ್ಪಳ ತಾಲೂಕಿನಲ್ಲೇ 200 ಕ್ಕೂ ಹೆಚ್ಚು ವಿವಿಧ ಫ್ಯಾಕ್ಟರಿಗಳಿವೆ. ಇವುಗಳಿಂದ ಜನರು ಕ್ಯಾನ್ಸರ್, ಅಸ್ತಮಾ ರೋಗಗಳಿಗೆ ತುತ್ತಾಗುತ್ತಾರೆಂದು ಜನ ಕಿಡಿಕಾರಿದ್ದಾರೆ.
ಫ್ಯಾಕ್ಟರಿಗಳ ಮಾಲಿನ್ಯದಿಂದ ಬದುಕು ದುಸ್ಥರವಾಗಿದೆ. ಬೃಹತ್ ಘಟಕ ಆರಂಭವಾದರೆ ನಾವು ಕೊಪ್ಪಳ ಬಿಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬಲ್ಡೋಟಾ ಫ್ಯಾಕ್ಟರಿ ಆರಂಭ ಬೇಡ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.