ಲಕ್ಷ್ಮೇಶ್ವರ:ಕೈಯಲ್ಲಿ ಮದ್ಯದ ಬಾಟಲ್ ಹಿಡಿಯುತ್ತಾ, ಡಿಜೆ ಸೌಂಡ್ಸ್ಗೆ ಸ್ಟೆಪ್ ಹಾಕುತ್ತಾ ಹೊಸ ವರ್ಷಾಚರಣೆಯನ್ನ ಯುವ ಜನತೆ ಬರಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಈ ತಾಲೂಕಿನ ಆಡಳಿತ ಮಂಡಳಿ ಮಾತ್ರ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದ್ದಲ್ಲದೆ, ಅದಕ್ಕೆ ವೈವಿಧ್ಯತೆಯ ಸ್ಪರ್ಶ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಹೌದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ತಹಶಿಲ್ದಾರ ವಾಸುದೇವ ಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಪಿಎಸ್ಐ ನಾಗರಾಜ ಗಡದ ಸೇರಿದಂತೆ ಇನ್ನಿತರ ಅಧಿಕಾರಿವರ್ಗ, ಕೈಯಲ್ಲಿ ಹೂವಿನ ಗುಚ್ಚ, ಸಿಹಿ ತಿನಿಸು ಹಿಡಿದುಕೊಂಡು ಪೌರ ಕಾರ್ಮಿಕರಿಗೆ ನೀಡುವ ಮೂಲಕ ಹೊಸ ವರ್ಷಾಚರಣೆ ಮಾಡಿದ್ದಾರೆ. ಲಕ್ಷ್ಮೇಶ್ವರದ ಪುರಸಭೆಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರೊಡನೆ, ತಾಲೂಕು ಅಧಿಕಾರಿಗಳ ತಂಡ ಹೊಸ ವರ್ಷಾಚರಣೆಯನ್ನು ವಿನೂತನವಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಮೂಲಕ ಆಚರಿಸಿದ್ದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.