ಲಕ್ಷ್ಮೇಶ್ವರ: ತಾಲೂಕಿನ ಆಡರಕಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನವಣೆಯಲ್ಲಿ ಅಧ್ಯಕ್ಷರಾಗಿ ಮಹಾಂತೇಶ ಬಸಪ್ಪ ಹವಳದ ಮತ್ತು ಉಪಾಧ್ಯಕ್ಷರಾಗಿ ಉಮೇಶ ಯಲ್ಲಪ್ಪ ಚಿಕ್ಕಣ್ಣವರ ಸೇರಿ ನಿರ್ದೇಶಕರುಗಳು ಅವಿರೋಧ ಆಯ್ಕೆಯಾದರು.
ವರದಿ : ಪರಮೇಶ ಎಸ್ ಲಮಾಣಿ.
ಗ್ರಾಮದ ಹಿರಿಯ ಸಹಕಾರಿಗಳಾದ ಚನ್ನಬಸಪ್ಪ ಹಳೆಮನಿ ಮಾತನಾಡಿ, ಸ್ಪರ್ಧಾತ್ಮಕ ಆರ್ಥಿಕ ಸನ್ನಿವೇಶದಲ್ಲಿ ಸಹಕಾರಿ ಸಂಸ್ಥೆಗಳು ವೃತ್ತಿಪರತೆ, ತಾಂತ್ರಿಕ ಅಳವಡಿಕೆ ಹಾಗೂ ಅನ್ವೇಷಣೆಗಳಿಗೆ ಆದ್ಯತೆ ನೀಡಬೇಕು. ಅಡರಕಟ್ಟಿಯ ಈ ಸಂಘವು 1950ರಲ್ಲಿ ಪ್ರಾರಂಭವಾದಾಗಿ ಇಲ್ಲಿಯವರೆ 75 ವರ್ಷಗಳ ಕಾಲ ಅವಿರೋಧವಾಗಿ ಆಡಳಿತ ಮಂಡಳಿ ಆಯ್ಕೆಯಾಗುತ್ತಾ ಬಂದಿದೆ. ಎಲ್ಲ ಸಹಕಾರ ಸಂಘಗಳು ಚುನಾವಣೆಗೆ ಒತ್ತು ನೀಡದೆ ಗ್ರಾಮದ ಎಲ್ಲರೂ ಅವಿರೋಧ ಆಯ್ಕೆ ಮುಖಾಂತರ ಆಡಳಿತ ಮಂಡಳಿ ರಚಿಸಿಕೊಂಡು ಕಾರ್ಯನಿರ್ವಹಿಸಿದಲ್ಲಿ ಪ್ರತಿಯೊಂದು ಸಂಘಗಳು ನಿರೀಕ್ಷಿಸಿದ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಹೇಳಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಂಗನಗೌಡ ಪ್ರಭುಗೌಡ ಪಾಟೀಲ ಮಾತನಾಡಿ, ಸಂಘವು ರೈತರು, ಮಹಿಳೆಯರು, ಯುವಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಉತ್ತಮ ಸಂಘ ಎಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಸತತ 25 ವರ್ಷಗಳಿಂದ ಲಾಭಗಳಿಸುತ್ತಾ ಸದಸ್ಯರಿಗೆ ಪ್ರತಿ ವರ್ಷ ಡಿವಿಡಂಡ್ ನೀಡುತ್ತಾ ಸಂಘದ ಲಾಭದಲ್ಲಿ 3.20 ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಆದ್ಯತೆ ನೀಡುತ್ತಿರುವದಲ್ಲದೆ ಕಾಲಕಾಲಕ್ಕೆ ಸದಸ್ಯರ ಅನುಕೂಲಕ್ಕೆ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಉಳಿದ ಸಂಘಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ವೇಳೆ ರಾಮಣ್ಣ ಚಿಕ್ಕಣ್ಣವರ, ಮಹಾದೇವಪ್ಪ ಹವಳದ, ವೀರಭದ್ರಪ್ಪ ಶಿಗ್ಲಿ, ಗಂಗನಗೌಡ ಪಾಟೀಲ, ಶಿದ್ದೇಶ್ವರ ಹವಳದ, ಮರಬಸಪ್ಪ ಚಿಕ್ಕಣ್ಣವರ, ಯಲ್ಲಪ್ಪ ರೊಳ್ಳಿ, ಕಲ್ಲಪ್ಪ ಗಂಗಣ್ಣವರ, ಕಲ್ಲಪ್ಪ ಮತ್ತಿಕಟ್ಟಿ, ನಿಂಗಪ್ಪ ಪ್ಯಾಟಿ ಸೇರಿದಂತೆ ಹರದಗಟ್ಟಿ, ಕೊಂಡಿಕೊಪ್ಪ ಗ್ರಾಮಗಳ ಹಿರಿಯರು ಇದ್ದರು. ಚುನಾವಣಾಧಿಕಾರಿಗಳಾಗಿ ಬಸವರಾಜ ನಿಡಗುಂದಿ ಕಾರ್ಯನಿರ್ವಹಿಸಿದರು.
