ಲಕ್ಷ್ಮೇಶ್ವರ: ಜಲಾನಯನ ಅಭಿವೃದ್ದಿ ಇಲಾಖೆ, ಜಿಲ್ಲಾಡಳಿತ, ಜಿ.ಪಂ.ಗದಗ ಮತ್ತು ಕೃಷಿ ಇಲಾಖೆ ಲಕ್ಷ್ಮೇಶ್ವರ ಇವುಗಳ ಆಶ್ರಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ದಿ ಘಟಕ ೨.೦ ಜಲಾನಯನ ಮಹೋತ್ಸವ, ತಾಲೂಕ ಮಟ್ಟದ ಜಲಾನಯನ ಮಹೋತ್ಸವ ಅಭಿಯಾನ ಕಾರ್ಯಕ್ರಮವು ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಗುರುವಾರ ನೆರವೇರಿತು.
ಕಾರ್ಯಮವನ್ನು ಶಾಸಕ ಡಾ.ಚಂದ್ರು ಲಮಾಣಿ ಭೂಮಿಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ವರದಿ : ಪರಮೇಶ ಎಸ್ ಲಮಾಣಿ
ನಂತರ ಗ್ರಾಮದ ಪ್ರಾಥಮಿಕ ಶಾಲೆಯ ಹತ್ತಿರದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಲು ಮಳೆಯಾಶ್ರಿತ ಒಣ ಭೂಮಿಯ ದೊಡ್ಡ ಪ್ರದೇಶಗಳನ್ನು ಜಲಾನಯನ ವ್ಯವಸ್ಥೆಯಡಿಯಲ್ಲಿ ತರಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಜಲಾನಯನ ಅಭಿವೃದ್ದಿಯನ್ನು ಕೈಗೊಳ್ಳಲಾಗುತ್ತಿದೆ, ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಮುಖ್ಯ ಉದ್ದೇಶವೆಂದರೆ ಮಣ್ಣು ಮತ್ತು ತೇವಾಂಶವನ್ನು ಸಂರಕ್ಷಿಸುವುದು ಮತ್ತು ಜಲಾನಯನ ಪ್ರದೇಶದ ಒಟ್ಟಾರೆ ಉತ್ಪಾದಕತೆಯನ್ನು ಸಮಗ್ರ ರೀತಿಯಲ್ಲಿ ಸುಧಾರಿಸಲು ಅವುಗಳ ಸಾಮರ್ಥ್ಯಗಳಿಗೆ ಅನುಗುಣವಾಗಿ ಭೂಮಿಯನ್ನು ಉತ್ತಮಗೊಳಿಸುವುದು ಇದರ ಉದ್ದೇಶವಾಗಿದೆ, ಈ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಉಪಕರಣಗಳು, ಬೀಜಗಳ ವಿತರಣೆ ಮಾಡಲಾಗುತ್ತಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.
ಗದಗ ಜಿಲ್ಲಾ ಉಪ ಕೃಷಿ ನಿರ್ದೆಶಕಿ ಸ್ಪೂರ್ತಿ ಜಿ.ಎಸ್., ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಣ್ಣು, ನೀರು ಸಂರಕ್ಷಣೆ ದೃಷ್ಟಿಯಿಂದ ಗದಗ ಜಿಲ್ಲೆಯಲ್ಲಿಯೇ ಲಕ್ಷ್ಮೇಶ್ವರ ತಾಲೂಕ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಮಹೋತ್ಸವಕ್ಕೆ ಆಯ್ಕೆಯಾಗಿದ್ದು, ಸುಮಾರು ೯ ಗ್ರಾಮಗಳ ೬ ಸಾವಿರ ಎಕರೆ ಪ್ರದೇಶದಲ್ಲಿ, ಮಳೆ ನೀರು ಕೋಯ್ಲು, ಹರಿಯವ ನೀರು ತಡೆಗಟ್ಟುವದು, ನೀರು ಇಂಗಿಸುವದು ಸೇರಿದಂತೆ ಮಣ್ಣು ಮತ್ತು ನೀರು ಸಂರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಸ್ವಾಮಿತ್ಯದಲ್ಲಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳ ಬದುಗಳ ಮೇಲೆ ಸಸಿಗಳನ್ನು ನೆಡುವ ಮೂಲಕ ಮತ್ತಷ್ಟು ಭೂಸಾರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ, ಮೂರು ವರ್ಷಗಳ ಈ ಯೋಜನೆ ಅನುಷ್ಠಾನಗೊಂಡಾಗ ಈ ಭಾಗದ ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಬದಲಾವಣೆ ಕಾಣಲಿದ್ದಾರೆ ಎಂದು ಹೇಳಿದರು.
ಕೆವಿಕೆ ಹುಲಕೋಟಿ ವಿಷಯ ತಜ್ಞ ನಾರಾಯಣ ಬಂಡಿ ಉಪನ್ಯಾಸ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಪ್ರೇಮಕ್ಕ ಲಮಾಣಿ ವಹಿಸಿದ್ದರು. ಅತಿಥಿಗಳಾಗಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ, ಹುಲ್ಲೂರ ಗ್ರಾ.ಪಂ.ಅಧ್ಯಕ್ಷೆ ಲೀಲಾ ತಳವಾರ, ವೀಣಾ ಅಕ್ಕಿ, ನಿಂಗಪ್ಪ ಬನ್ನಿ, ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ, ಸೋಮ್ಲಪ್ಪ ನಾಯಕ, ಜೀವಪ್ಪ ಡಾವ್, ಥಾವರೆಪ್ಪ ಲಮಾಣಿ, ಸೀತವ್ವ ಲಮಾಣಿ, ಕೃಷಿ ಅಧಿಕಾರಿಗಳಾದ ಚಂದ್ರಶೇಖರ ನರಸಮ್ಮನವರ, ಪಿ.ಕೆ.ಹೊನ್ನಪ್ಪನವರ, ಮುಂತಾದವರು ಇದ್ದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಸ್ವಾಗತಿಸಿದರು, ಎನ್.ಎನ್.ಶಿಗ್ಲಿ, ಎಚ್.ಎಫ್.ನದಾಪ್ ನಿರೂಪಿಸಿದರು.
