ಗದಗ, ಜುಲೈ 14:
ಗದಗ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಭಾರೀ ಬಲೆ ಬೀಸಿದ್ದಾರೆ. ಒಟ್ಟಾರೆಯಾಗಿ 6.7 ಕಿಲೋಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು, 6 ಆರೋಪಿತರನ್ನು ಸೆರೆಹಿಡಿಯಲಾಗಿದ್ದು, ಅಂದಾಜು ₹6,70,000 ರೂ.ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರು ತಿಳಿಸಿದರು.
ಈ ಕುರಿತು ಇಂದು ಗದಗನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಅವರು ಮಾತನಾಡಿದರು.
ಇನ್ನು ಅಕ್ರಮ ಗಾಂಜಾ ಪತ್ತೆಯ ಹೊರತಾಗಿಯೂ, ಪೊಲೀಸರು ಒಂದು ಬೈಕ್, 6 ಮೊಬೈಲ್ ಫೋನುಗಳು ಮತ್ತು ₹1,000 ನಗದು ಹಣವನ್ನೂ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ (FIR: 148/2025 ಕಲಂ 20(ಎ)).
ಈ ಕಾರ್ಯಾಚರಣೆಯ ಹಿಂದೆ ಪೊಲೀಸರು ಚಾಣಾಕ್ಷತನದಿಂದ ಮುನ್ನೋಡುವಿಕೆ, ತಾಂತ್ರಿಕ ತಂಡದ ಸಹಾಯ, ಮತ್ತು ನಿಖರವಾದ ಮಾಹಿತಿಯನ್ನು ಬಳಸಿದ್ದು, ಇನ್ನೂ ಹೆಚ್ಚಿನ ಪೂರೈಕೆದಾರರ ಕುರಿತ ತನಿಖೆ ಮುಂದುವರೆದಿದೆ.
ಈ ಪೊಲೀಸ್ ತಂಡದ ಶ್ರೇಷ್ಠ ಕಾರ್ಯತತ್ಪರತೆಗೆ ಎಸ್.ಪಿ. ನೇಮಗೌಡ ಅವರು ಶ್ಲಾಘನೆ ವ್ಯಕ್ತಪಡಿಸಿ, “ಅಕ್ರಮ ಮಾದಕವಸ್ತು ಜಾಲವನ್ನು ಬೇರು ಸಮೇತ ಕಿತ್ತೆಸೆಯಲು ಪೊಲೀಸರು ಸದಾ ಸಜ್ಜಾಗಿರುತ್ತಾರೆ” ಎಂದು ತಿಳಿಸಿದರು.
ಬಂಧಿತ ಆರೋಪಿಗಳ ವಿವರಗಳು ಹೀಗಿವೆ:
- ಬಾಪು ಪುಣಜಪ್ಪ ಹರಣಸಿಕಾರಿ (48), ಕೋಟುಮಚಗಿ
- ಚಂದಪ್ಪ ಪುಣಜಪ್ಪ ಹರಣಸಿಕಾರಿ (48), ಕೋಟುಮಚಗಿ
- ಗಾಯಿತ್ರಿ ಮಾರುತಿ ಕಾಳೆ (35), ಬಿಂಕದಕಟ್ಟಿ ವಾಸಿ
- ಮಾರುತಿ ಶೇಖಪ್ಪ ಕಾಳೆ (39), ಬೆಟಗೇರಿ
- ಗೋಪಾಲ ರಾಮಚಂದ್ರ ಬಸವಾ (57), ಅಳವಂಡಿ, ಕೊಪ್ಪಳ
- ಕಲ್ಯಾಣಬಾಬು ಚಿನ್ನನಾಗು (23), ಬುಡ್ಡಪ್ಪನಗರ, ಅನಂತಪುರ, ಆಂಧ್ರಪ್ರದೇಶ
ಕಾರ್ಯಾಚರಣೆಯಲ್ಲಿ ಎಸ್ಪಿ ಬಿ.ಎಸ್.ನೇಮಗೌಡ ಇವರ ಮಾರ್ಗದರ್ಶನದಲ್ಲಿ, ಗದಗ ಉಪ-ವಿಭಾಗದ ಡಿಎಸ್ಪಿ ಶ್ರೀ ಮುರ್ತುಜಾ ಖಾದ್ರಿ ಹಾಗೂ ಸಿಈಎನ್ ಡಿವೈಎಸ್ಪಿ ಮಹಾಂತೇಶ ಸಜ್ಜನ ಇವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿದ್ದರಾಮೇಶ್ವರ ಗಡೇದ, ಪಿಎಸ್ಐಗಳಾದ ಎ.ಆರ್.ರಾಮೇನಹಳ್ಳಿ, ಎಸ್.ಬಿ.ಕವಲೂರ ಮತ್ತು ಸಿಬ್ಬಂದಿಯವರಾದ ಪ್ರಕಾಶ ಗಾಣಗೇರ, ಅಶೋಕ ಬೂದಿಹಾಳ, ಅನೀಲ ಬನ್ನಿಕೊಪ್ಪ, ಗಂಗಾಧರ ಮಜ್ಜಗಿ, ರಾಜಮಹೃದ ಅಲಮದಾರ. ಹೇಮಂತ ಪರಸಣ್ಣವರ, ಲಕ್ಷ್ಮಣ ಪೂಜಾರ, ಪ್ರವೀಣ ಶಾಂತಪ್ಪನವರ, ರವಿ ನಾಯ್ಕರ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಗುರು ಬೂದಿಹಾಳ, ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡ ಹಲವು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಬಿ.ಎಸ್.ನೇಮಗೌಡ ಅವರು, ಪ್ರಶಂಸೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗುವದು ಎಂದು ಘೋಶಿಸಿದ್ದಾರೆ.