ಲಕ್ಷ್ಮೇಶ್ವರ : ಕೊಳವೆ ಬಾವಿ ಬತ್ತಿಹೋಗಿ ಬೆಳೆ ಹಾನಿಯಾಗಿದ್ದು, ಇದಕ್ಕೆ ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡಬೇಕೆಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ವತಿಯಿಂದ ತಹಶಿಲ್ದಾರಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಮಾತನಾಡಿದ ತಾಲೂಕ ಅಧ್ಯಕ್ಷ ಅಜಯ ಕರಿಗೌಡ್ರ , ತಾಲೂಕಿನ ದೊಡ್ಡೂರು, ಸೂರಣಗಿ, ಉಳ್ಳಟ್ಟಿ, ಉಂಡೇನಹಳ್ಳಿ, ಶ್ಯಾಬಳ, ಶಿಗ್ಲಿ, ಗೋವನಾಳ, ಮುನಿಯನತಾಂಡಾ, ದೊಡ್ಡರ ತಾಂಡಾ, ಸುವರ್ಣಗಿರಿ, ಅಡರಕಟ್ಟಿ, ಲಕ್ಷ್ಮೇಶ್ವರ, ಹರದಗಟ್ಟಿ, ಹಿರೇಮಲ್ಲಾಪುರ, ವಡೆಯರಮಲ್ಲಾಪುರ, ಗುಲಗಂಜಿಕೊಪ್ಪ, ರಾಮಗೇರಿ, ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಈ ಗ್ರಾಮಗಳಲ್ಲಿನ ನೀರಾವರಿ ಜಮೀನುಗಳಲ್ಲಿರುವ ಕೊಳವೆಬಾವಿಗಳು ಸಂಪೂರ್ಣ ಬತ್ತಿಹೋಗಿವೆ.
ಇದರಿಂದ ಪ್ರಮುಖ ಬೆಳೆಗಳಾದ ಶೇಂಗಾ, ಅಲಸಂದಿ, ಜೋಳ, ಗೋಧಿ ಇವುಗಳು ಸಂಪೂರ್ಣ ಹಾನಿಯಾಗಿದ್ದು, ಸದರಿ ಬೆಳೆಗಳಿಗೆ ರೈತರು ಒಂದು ಎಕರೆಗೆ ಸುಮಾರು 30-35 ಸಾವಿರ ರೂಪಾಯಿಗಳನ್ನು ಸಾಲ ಸೂಲ ಮಾಡಿ, ಕೈಗಡ ಹಣ ಪಡೆದು ಖರ್ಚು ಮಾಡಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದೆ. ಕಾರಣ ಸದರಿ ಬೆಳೆ ಹಾನಿಯಾದ ಬಗ್ಗೆ ಸರಕಾರದಿಂದ ಸೂಕ್ತ ಬೆಳೆ ಪರಿಹಾರ, ಬೆಳೆ ಹಾನಿ, ಬೆಳೆ ವಿಮೆ ಹಾಗೂ ಸಹಾಯ ಧನವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ನಂತರ ಮಾತನಾಡಿದ ಸಂಘದ ಕಾರ್ಯದರ್ಶಿ ಲಕ್ಷ್ಮಣ ಲಮಾಣಿ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕ ಪ್ರಮಾಣದ ಬೆಸಿಗೆ ಇರುವದರಿಂದ ಹೊಲದಲ್ಲಿನ ಬೆಳೆಗಳು ಒಣಗಿ ಹೋಗುತ್ತಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಬೆಳೆ ವಿಮೆ, ಬೆಳೆ ಪರಿಹಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗಂಗಾಧರ ಬಂಕಾಪೂರ, ಸುರೇಶ ಬಾಗಲದ, ಅಲ್ತಾಫ ನೂರಬೇಗಮಿರಜ, ದಾದಾಪೀರ ನೂರಬೇಗಮೀರಜ, ರಾಮಪ್ಪ ಲಮಾಣಿ, ನಿಂಗನಗೌಡ್ರ ಪಾಟೀಲ್, ರಮೇಶ ಹುಲಕೋಟಿ, ರಮೇಶ ಕೋಳಿವಾಡ, ಮಹಾಲಿಂಗಪ್ಪ ನಾದಿಗಟ್ಟಿ, ಶಿವಮೂರ್ತೆಪ್ಪ ಈಳಿಗೇರ, ಚಂದ್ರಗೌಡ ಕರೆಗೌಡ್ರ, ವಸಂತಗೌಡ್ರ ಕರೆಗೌಡ್ರ, ಮುತ್ಸಾರ ನೂರಮಿರ್ಜಾ ಮತ್ತಿತರಿದ್ದರು.