ಗದಗ: ಪಿರಾಮಿಡ್ ಶೈಲಿಯ ವಾತಾವರಣವು ತಂಡ ಕಾರ್ಯ ಮತ್ತು ಪರಸ್ಪರ ಸಹಕಾರವನ್ನು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಕಲಿಕೆ ಮತ್ತು ಅನುಭವಗಳನ್ನು ಹಂಚಿಕೊಳ್ಳುವುದರಿಂದ ಸಮಸ್ಯೆ ಪರಿಹಾರ ಹಾಗೂ ನಿರ್ಧಾರಗಳತ್ತ ಒಗ್ಗಟ್ಟಾಗಿ ಪ್ರಯತ್ನಿಸುತ್ತಾರೆ. ಇದರಿಂದ ಅವರ ವಿಶ್ಲೇಷಣಾತ್ಮಕ ಹಾಗೂ ಸೃಜನಶೀಲ ಯೋಚನೆಗಳು ವೃದ್ಧಿಸುತ್ತವೆ ಎಂದು ಗಜೇಂದ್ರಗಡದ ಸಾಯಿರಾಮ ಸಮಿತಿಯ ಡಾ. ರಾಮಶಾಸ್ತ್ರಿ ಎಸ್. ಜೀರೆ ಅವರು ಹೇಳಿದರು.
ಗದಗನ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪಿರಾಮಿಡ್ ಎಂದರೆ ಪುಟ್ಟ ಅಡಿಪಾಯದಿಂದ ಆರಂಭಿಸಿ ಹಂತ ಹಂತವಾಗಿ ಮೇಲಕ್ಕೆ ಏರುತ್ತಾ ಸಮಗ್ರ ರೂಪವನ್ನು ಪಡೆಯುವ ರಚನೆ. ಇದನ್ನು ಶೈಕ್ಷಣಿಕ ಪ್ರಕ್ರಿಯೆಗೆ ಅನ್ವಯಿಸಿದಾಗ, ಪಿರಾಮಿಡ್ ಶೈಲಿಯ ವಾತಾವರಣವು ವಿದ್ಯಾರ್ಥಿಗಳಿಗೆ ಹಂತಗಟ್ಟೆಯ ಕಲಿಕೆಯನ್ನು ಹೊಂದಿಸಲು ಸಹಕಾರಿಯಾಗುತ್ತದೆ. ಇಂಥಹ ವಾತಾವರಣವನ್ನ ಪ್ರಪ್ರಥಮವಾಗಿ ನೋಡಿದ್ದು ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಶಾಲೆಯಲ್ಲಿ. ಅಭ್ಯಾಸದಲ್ಲಿ ಹಿಂದುಳಿದ ಮಗುವನ್ನ ಇಲ್ಲಿ ತಂದು ಬಿಟ್ಟರೆ ಮುಂದುವರಿದು ಬುದ್ಧಿವಂತರಾಗುತ್ತಾರೆ. ಅಂತಹ ವಾಸ್ತು ಶಿಲ್ಪವನ್ನು ಹೊಂದಿದ ಪಿರಾಮಿಡ್ ತರಗತಿಗಳನ್ನು ಇಲ್ಲಿ ನಿರ್ಮಿಸಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ವೈದ್ಯರು, ಎಂಜಿನಿಯರುಗಳು, ಐ.ಎ.ಎಸ್., ಕೆ.ಎ.ಎಸ್. ಹೊಂದಿ ಆದರ್ಶ ವ್ಯಕ್ತಿಗಳಾಗುವದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ವಿಜಯಕುಮಾರ ಮಾಳೇಕೊಪ್ಪಮಠ, ಅವರು ಮಾತನಾಡಿ, ನಾವು ಓದಿ ಬೆಳೆದು ಬಂದ ರೀತಿಗೂ, ಈಗಿನ ಮಕ್ಕಳ ಓದಿನ ರೀತಿ ನೋಡಿದಾಗ ಈಗಿನ ಮಕ್ಕಳು ಬಹಳ ಅದೃಷ್ಟವಂತರು. ಇಂತದೊಂದು ಅತ್ಯುನ್ನತವಾದ ಶಾಲೆ ನಮ್ಮ ಗದಗನಲ್ಲಿರುವುದು ನಮ್ಮೆಲ್ಲರ ಹೆಮ್ಮೆ.ನಾಲ್ಕೈದು ವರ್ಷದ ಮಕ್ಕಳು ಎಷ್ಟು ಧೈರ್ಯದಿಂದ ವೇದಿಕೆಯ ಮೇಲೆ ನಿಂತು ನಿರರ್ಗಳವಾಗಿ ಮಾತನಾಡುತ್ತಾರೆ. ಈ ವಯಸ್ಸಿನಲ್ಲಿ ನಾವಿನ್ನೂ ಶಾಲೆಯ ಮೆಟ್ಟಿಲನ್ನು ಹತ್ತಿರಲಿಲ್ಲ. ಆಗಿನ ಜನರೇಷನ್ಗೂ ಈಗಿನದಕ್ಕೂ ಹೋಲಿಕೆ ಮಾಡಿದಾಗ ಇದು ಮುಂದುವರೆದ ಯುಗ ಎಂದು ಗೊತ್ತಾಗುತ್ತದೆ. ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ ಪ್ರಯೊಗಗಳ ಮೂಲಕ ವೈಜ್ಞಾನಿಕ ಸಂಗತಿಗಳನ್ನು ತಿಳಿಸಲಾಗುತ್ತದೆ ಹಾಗಾಗಿ ಮಕ್ಕಳು ಚಿಕ್ಕವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶ ಪ್ರೇಮ ಹೊಂದುವ ಸಮರ್ಪಣಾಭಾವದ ಗುಣಗಳನ್ನು ಕಲಿಸಬೇಕು ಎಂದರು.
ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡಿ, ಡಾ. ರಾಮಶಾಸ್ತ್ರಿ ಜೀರೆ ಅವರು ಶ್ರೇಷ್ಠ ವೈದ್ಯರಾಗಿದ್ದು, ತಮ್ಮ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದ್ದಾರೆ. ಸರಳ ಸಜ್ಜನಿಕೆಯ ಸ್ವಭಾವದವರು, ದೀನ ದಲಿತ, ಬಡವರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಸಲ್ಲಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ವೈದ್ಯಕೀಯ ಶಿಕ್ಷಣಾರ್ಥಿಗಳ ಅನುಕೂಲಕ್ಕಾಗಿ ಗಜೇಂದ್ರಗಡದಲ್ಲಿ ನರ್ಸಿಂಗ್ ಕಾಲೇಜು, ಮತ್ತು ಅರೆ ವೈದ್ಯಕಿಯ ಕಾಲೇಜು ತೆರೆದು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ನೀಡುತ್ತಿದ್ದು, ಆ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.
ಇನ್ನು ವಿಜಯಕುಮಾರ ಮಾಳೆಕೊಪ್ಪಮಠ ಅವರೂ ಸಹ ಉದ್ಯಮಿಯಾಗಿದ್ದು, ಶಿಕ್ಷಣದ ಕುರಿತು ಅಪಾರ ಆಸಕ್ತಿಯುಳ್ಳವರಾಗಿದ್ದಾರೆ. ಶ್ರೀಯುತರು ವಿ. ಆರ್. ಎಲ್. ಸಂಸ್ಥಾಪಕರಾದ ಶ್ರೀ ವಿಜಯ ಸಂಕೇಶ್ವರ ಅವರ ಬಾಲ್ಯ ಸ್ನೇಹಿತರಾಗಿದ್ದಾರೆ. ಶ್ರೀ ವಿಜಯ ಸಂಕೇಶ್ವರರು ಯಾವಾಗ ಗದಗಗೆ ಬಂದರು ಮೊದಲು ಭೇಟಿ ನಿಡುವುದು ವಿಜಯಕುಮಾರ ಮಾಳೆಕೊಪ್ಪಮಠರವರನ್ನು. ಶಿಕ್ಷಣ ಗುಣಮಟ್ಟದ ಕುರಿತು ನನ್ನ ಕೆಲ ಸ್ನೇಹಿತರು ಮಾತನಾಡುತ್ತ ಫಿನ್ಲ್ಯಾಂಡ ದೇಶದ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆಯೆಂದು ತಿಳಿಸಿದ್ದರು. ಆದರೆ ಶ್ರೀ ವಿಜಯಕುಮಾರ ಮಾಳೇಕೊಪ್ಪಮಠ ಅವರು ಫಿನ್ಲ್ಯಾಂಡಗಿಂತ ನೆದರ್ಲ್ಯಾಂಡ ದೇಶದ ಶಿಕ್ಷಣ ಪದ್ಧತಿ ಜಗತ್ತಿನಲಿಯೇ ಅತ್ಯುತ್ತಮವಾಗಿದೆ ಎಂದು ತಿಳಿಸಿದರು ಹಾಗೂ ನಾವು ಯಾವುದೇ ವ್ಯಕ್ತಿಯನ್ನಾಗಲಿ ಕೇವಲವಾಗಿ ನೋಡಬಾರದೆಂದರು. ಪ್ರತಿಯೊಬ್ಬರಲ್ಲಿಯೂ ಏನಾದರೊಂದು ವಿಶಿಷ್ಠ ಕಲೆ ಮತ್ತು ಬುದ್ಧಿವಂತಿಕೆ ಇದ್ದೆ ಇರುತ್ತದೆ ಎಂದರು.
ಇದೇ ವೇಳೆ ಈರ್ವರೂ ಅತಿಥಿ ಮಹೋದಯರಿಗೆ ಚಿಕ್ಕಟ್ಟಿ ಸಮೂಹ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪಾಲಕರು ತಮ್ಮ ಮಕ್ಕಳ ಕಲಿಕೆಯ ಪ್ರಗತಿಯ ಕುರಿತಾದ ರಿಕಾರ್ಡಿಂಗ್ ಅನಿಸಿಕೆಗಳನ್ನು ಎಲ್ ಇಡಿ ಪರದೆಯಲ್ಲಿ ಹಂಚಿಕೊಂಡರು.ನಂತರ ಪದವಿ ಸಮಾರಂಭ ನೆರವೇರಿತು.

ಪದವಿ ಸಮಾರಂಭದ ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯರಾದ ಆರ್. ಜಿ. ಚಿಕ್ಕಮಠ, ಮಾರುತಿ ಬುಕ್ ಸ್ಟಾಲ್ ಮಾಲೀಕರಾದ ಸುರೇಶ ಅಂಗಡಿ, ವಿನಯ್ ಚಿಕ್ಕಟ್ಟಿ ಐ. ಸಿ. ಎಸ್. ಇ. ಶಾಲೆಯ ಉಪ ಪ್ರಾಚಾರ್ಯರಾದ ಶೋಭಾ ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಶಾಲೆಯ ಉಪ ಪ್ರಾಚಾರ್ಯರಾದ ರಿಯಾನಾ ಮುಲ್ಲಾ ಹಿರಿಯ ಉಪನ್ಯಾಸಕರಾದ ಅನಿಲ ನಾಯಕ್ ಅವರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತು ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬುದ್ಧಿಮಟ್ಟದ ಸ್ಪರ್ಧೆ ಹಾಗೂ ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ಮತ್ತು ಪಾಲಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೂ ಸಹ ಬಹುಮಾನಗಳನ್ನು ಗಣ್ಯಮಾನ್ಯರು ಪ್ರಧಾನ ಮಾಡಿದರು.
ಗಣ್ಯಮಾನ್ಯರೆಲ್ಲರೂ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಲಿಟಲ್ ಮಿಲೇನಿಯಂ ಪ್ರಿ-ಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಸಾದರ ಪಡಿಸಿದರು.ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ ಸ್ವಾಗತಿಸಿದರು. ಅತಿಥಿಗಳ ಸಂಕ್ಷಿಪ್ತ ಪರಿಚಯವನ್ನು ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ ಮತ್ತು ಉಪ ಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಕೌಸರಬಾನು ಮತ್ತು ಅಕ್ಷತಾ ಖೋಡೆ ನಿರೂಪಿಸಿದರೆ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ವಂದಿಸಿದರು.
