ಗದಗ: ದೊಡ್ಡವರು, ಚಿಕ್ಕವರು, ಜಾತಿ ಧರ್ಮ, ಭಾಷೆ, ಕರಿಯ ಬಿಳಿಯನೆಂಬ, ಬೇಧ-ಭಾವ ಮಾಡದೇ ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಇರಬೇಕು. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ತರಬೇತಿ ನೀಡಿ, ಹೊರಸೂಸುವಂತೆ ಪ್ರತಿಯೊಬ್ಬ ಶಿಕ್ಷಕರು ಮಾಡಬೇಕೆಂದು ಗದಗ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್.ಬುರುಡಿ ಅವರು ಹೇಳಿದರು.
ಗದಗ ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ವಾರ್ಷಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
“ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೆ” ಎನ್ನುವ ನುಡಿಯಂತೆ ಮಕ್ಕಳನ್ನು ಚಿಕ್ಕವರಿರುವಾಗಲೇ ಉತ್ತಮವಾದುದನ್ನು ಮಾತ್ರ ಕಲಿಸಿಕೊಟ್ಟಾಗ, ದೊಡ್ಡವರಾದ ಮೇಲೆ, ದೇಶಕ್ಕೆ ಕೊಡುಗೆ ಕೊಡುವಂತ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ.

ಅದೇ ರೀತಿ, ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರೂ ಸಹ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದೇ ದಾರಿಯಲ್ಲಿ ತಮ್ಮ ಈರ್ವರೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ್ದಾರೆ. ಮಕ್ಕಳನ್ನಷ್ಟೇ ಅಲ್ಲದೆ ಇಡಿ ಕ್ಯಾಂಪಸ್ ನ್ನೆ ಮಾದರಿ ಸಂಸ್ಥೆಯನ್ನಾಗಿ ಬೆಳೆಸಿದ್ದು, ಗದಗ ಜಿಲ್ಲೆಯಲ್ಲೇ ಅತ್ಯುತ್ತಮ ಶಾಲಾ-ಕಾಲೇಜು ಎನ್ನುವ ಕೀರ್ತಿಗೆ ಸಂಸ್ಥೆಗೆ ಪಾತ್ರವಾಗಿದೆ ಎಂದರು.
ಇದೇ ವೇಳೆ ಎಲ್ಇಡಿ ಸ್ಕ್ರೀನ್ ಉದ್ಘಾಟನೆಯನ್ನ ಶ್ರೀಮತಿ ಸುನೀತಾ.ಆರ್. ಬುರಡಿ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪಾಲಕರಾದ ನಾವು ನಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನೀಯರ್, ಆಗುವಂತೆ ಒತ್ತಾಯಿಸುವದನ್ನ ಬಿಡಬೇಕು.ಅವರಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯಿದೆ ಎಂಬುದನ್ನು ಮೊದಲು ಅರಿಯಬೇಕು. ಅದೇ ವಿಷಯವನ್ನು ಅವರಿಗೆ ಹೆಚ್ಚಿನ ರೀತಿಯಲ್ಲಿ ತರಬೇತಿ ಕೊಟ್ಟರೆ ಪ್ರತಿಯೊಬ್ಬ ವಿದ್ಯಾರ್ಥಿ ಸರಳವಾಗಿ ಗ್ರಹಿಸಿಕೊಂಡು ಬುದ್ದಿವಂತನಾಗುತ್ತಾನೆ.
ಮೊದಲು ನಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದೇ ವಿಷಯದಲ್ಲಿ ಏನೆಲ್ಲ ಸಾಧನೆ ಮಾಡಬಹುದೋ, ಆ ವಿಷಯ ಆಯ್ಕೆ ಮಾಡಿಕೊಂಡು ಸತತ ಅಭ್ಯಾಸ ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧಕನಾಗುತ್ತಾನೆ ಎಂದು ತಿಳಿಸಿದರು.
ಸಕ್ಸಸ್ ಎನ್ನುವುದು ಬೇರೆಲ್ಲೂ ಇಲ್ಲ, ಅದು ನಮ್ಮೊಳಗೆ, ನಮ್ಮ ನಡೆ-ನುಡಿಯಲ್ಲಿದೆ. ಯಾರೆಲ್ಲ ಸಂತೋಷವಾಗಿದ್ದಾರೋ ಅವರೆಲ್ಲರೂ ಸಕ್ಸಸ್ ಪಡೆದವರು ಅಂತ ಹೇಳಬಹುದು. ಜೀವನದಲ್ಲಿ ಹಣ ಸಂಪಾದನೆ ಮಾಡಿ ಕೋಟ್ಯಾಧಿಪತಿಯಾಗುವುದೇ ಸಕ್ಸಸ್ಲ್ಲ. ಆ ಹಣ ನಮ್ಮ ಬೆವರಿನ ಪ್ರತಿಫಲದಿಂದ ಬಂದಿದ್ದರೆ, ಅದು ನಿಜವಾದ ಸಕ್ಸಸ್ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ವಾಯ್. ಚಿಕ್ಕಟ್ಟಿಯವರು ಮಾತನಾಡಿ, ತಮ್ಮ ಬೆಳವಣಿಗೆಗೆ ಕಾರಣರಾದ ಸಹೋದರ ಅಪ್ಪಾಸಾಬ ಚಿಕ್ಕಟ್ಟಿ ಹಾಗೂ ಕಾಶಿಬಾಯಿ ಚಿಕ್ಕಟ್ಟಿಯವರಿಗೆ ಧನ್ಯತಾಭಾವದ ಕೃತಜ್ಞತೆ ಸಲ್ಲಿಸಿದರು. ನನ್ನನ್ನು ಚಿಕ್ಕಂದಿನಿಂದ ಎಮ್ಎಸ್ಸಿ ಪದವಿವರೆಗೂ ಶ್ರಮವಹಿಸಿ ನನ್ನನ್ನು ಅವರು ಓದಿಸಿದ್ದಾರೆ. ಹೀಗಾಗಿ ಇಂದು ನಾನು ಕಲಿತು ಕಲಿಸುತ್ತಿರುವೆ. ನನ್ನನ್ನು ಈ ಹಂತಕ್ಕೆ ಬೆಳೆಸಿದ ಅಣ್ಣ-ಅತ್ತಿಗೆಗೆ ಗೌರವ ಸಮರ್ಪಿಸಬೇಕಾಗಿದ್ದು ನನ್ನ ಕರ್ತವ್ಯ ಎಂದು ಅವರನ್ನ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಡಿಡಿಪಿಐ ಆರ್.ಎಸ್.ಬುರುಡಿ ಹಾಗೂ ಶ್ರೀಮತಿ ಸುನಿತಾ. ಆರ್. ಬುರುಡಿ ದಂಪತಿಗಳನ್ನ ಮತ್ತು ಅಥಣಿ ಚಿಕ್ಕಟ್ಟಿ ಶಾಲೆಯ ಕಾರ್ಯದರ್ಶಿಗಳಾದ ಸದಾಶಿವ ಚಿಕ್ಕಟ್ಟಿ ಹಾಗೂ ಶ್ರೀಮತಿ ಕೋಮಲ ಚಿಕ್ಕಟ್ಟಿ ದಂಪತಿಗಳನ್ನ ಹಾಗೂ ಕುಮಾರಿ ಶ್ರಾವ್ಯಾ ಎಸ್. ಚಿಕ್ಕಟ್ಟಿ ಇವರೆಲ್ಲರಿಗೂ ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಿ.ಸಿ.ಎ ಕಾಲೇಜಿನ ಪ್ರಾಚಾರ್ಯರಾದ ಬಿಪಿನ್ ಎಸ್. ಚಿಕ್ಕಟ್ಟಿ ಸ್ವಾಗತಿಸಿದರು.
8ನೇ ತರಗತಿ ವಿದ್ಯಾರ್ಥಿನಿಯರಾದ ಅದಿಬಾನಾಜ್ ಕೊತ್ವಾಲ್, ಪಲ್ಲವಿ ಜೆ. ನಿರಾಲಾ, ಶ್ರೇಯಾ ಮುಳಗುಂದಮಠ ಹಾಗೂ ಪ್ರತೀಕ್ಷಾ ದೊಡ್ಡಮನಿ ನಿರೂಪಿಸಿದರು.
ಅಕ್ಷರಾ ಎಮ್. ಆಡೂರು, ಪ್ರತೀಕ್ಷಾ ಬಿ. ಕಳಸದ, ಶ್ರೇಯಾ ಸಾಸನೂರು, ಶಿವಾನಿ ಆಸಂಗಿ, ನಯನಾ ಕೆ. ಚಿಲವೇರಿ ಹಾಗೂ ತನುಶ್ರೀ ವಿ. ಸೊಪ್ಪಿನ, ಗಣ್ಯಮಾನ್ಯರ ಪರಿಚಯ ಮಾಡಿಕೊಟ್ಟರು.
ಆಡಳಿತಾಧಿಕಾರಿಗಳಾದ ಶ್ರೀಮತಿ ಕಲಾವತಿ ಕೆಂಚರಾಹುತ ವಂದನೆ ಸಲ್ಲಿಸಿದರು.
ಈ ವೇಳೆ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷ ಭೂಷಣಗಳು, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಾಯ್. ಎನ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಭಟ್, ವಿನಯ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಪುಷ್ಪಲತಾ ಬೆಲೇರಿ ಹಾಗೂ ಎಸ್. ವಾಯ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಅನುಶ್ರೀ ವಸ್ತ್ರದ ಉಪಸ್ಥಿತರಿದ್ದರು.