ಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಳಂಬ ಹಿನ್ನೆಲೆ ನಗರದ ಉಪವಿಭಾಗಧಿಕಾರಿ ಕಚೇರಿಗೆ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
ಎಸಿ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಅವರ ಕಚೇರಿ ಎದುರು ಪ್ರತಿಭಟನೆ ಕುಳಿತರು. ಈ ವೇಳೆ ಕಚೇರಿಗೆ ಆಗಮಿಸಿದ, ಎಸಿ ಗಂಗಪ್ಪ ಅವರನ್ನೂ ಕಚೇರಿ ಒಳಗೆ ಬಿಡದ ಮಾಜಿ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು ಕೆಲಹೊತ್ತು ಧಿಕ್ಕಾರ ಕೂಗುತ್ತಾ ತಡೆದು ನಿಲ್ಲಿಸಿದರು.
ಎಸಿ ಗಂಗಪ್ಪ ಅವರು,ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಆರು ತಿಂಗಳಿನಿಂದ ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷ ಹುದ್ದೆ ಖಾಲಿ ಇವೆ. ಹೀಗಿದ್ದರೂ ಸಹ ಅವಳಿ ನಗರದ ಅಭಿವೃದ್ಧಿಗೆ ಆಸಕ್ತಿ ವಹಿಸದೇ, ಅಡ್ಡಿಪಡಿಸುತ್ತಿದ್ದಾರೆ. ಮೇಲಾಗಿ ಸಚಿವ ಹೆಚ್.ಕೆ.ಪಾಟೀಲ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಫೆಬ್ರುವರಿ ಮೊದಲ ವಾರದಲ್ಲೇ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ, ಅವಳಿ ನಗರದ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಚುನಾವಣೆ ನಡೆಯದೇ ಹೋದಲ್ಲಿ, ಮುಂಬರುವ ದಿನಗಳಲ್ಲಿ ಎಸಿ ಕಚೇರಿಗೆ ಬೀಗ ಜಡಿಯುವ ಮೂಲಕ ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ನ ಇಬ್ಬರು ನಗರಸಭೆ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಸಿದ್ದಮನಳ್ಳಿ ಹಾಗೂ ಇಮ್ತಿಯಾಜ್ ಶಿರಹಟ್ಟಿ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ, ಸರ್ಕಾರದ ಮೀಸಲಾತಿಯನ್ನೇ ಎತ್ತಿ ಹಿಡಿದು, ಇವರ ಅರ್ಜಿ ತಿರಸ್ಕೃತಗೊಳಿಸಿದೆ. ಹೀಗಾಗಿ ಮೊದಲಿದ್ದ ಮೀಸಲಾತಿಯೇ ಮುಂದುವರೆಯಲಿದ್ದು, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಬೇಕಿದೆ.ಇನ್ನು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಎಂಎಲ್ಸಿ ಎಸ್.ವಿ.ಸಂಕನೂರ ಹಾಗೂ ಸಲೀಂ ಅಹ್ಮದ್ ಅವರಿಗೆ ಮತ ಚಲಾಯಿಸಲು ಅವಕಾಶವಿಲ್ಲ ಎನ್ನಲಾಗಿದೆ.
“ಈಗಾಗಲೇ ಕೋರ್ಟ ಆದೇಶ ಮಾಡಿದ್ದರೂ ಸಹ, ಅಧಿಕಾರಿಗಳು ಚುನಾವಣೆ ನಡೆಸುತ್ತಿಲ್ಲ. ಇದರಿಂದ ಜನರಿಂದ ಆಯ್ಕೆಯಾದ ಸದಸ್ಯರು ಜನರ ಕೆಲಸ ಮಾಡಲು ಆಗುತ್ತಿಲ್ಲ. ಬಿಜೆಪಿ ಅವರು ಅಧಿಕಾರ ನಡೆಸಬಾರದು ಎಂದು ಸಚಿವ ಹೆಚ್.ಕೆ.ಪಾಟೀಲ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಗದಗನಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ನಡೆಸಬಾರದು ಅನ್ನುವ ಹುನ್ನಾರ ಸ್ವತಃ ಹೆಚ್.ಕೆ.ಪಾಟೀಲರದ್ದಾಗಿದೆ.
ರಾಜು ಕುರಡಗಿ. ಜಿಲ್ಲಾಧ್ಯಕ್ಷ. ಗದಗ
” ಫೆಬ್ರುವರಿ 2 ನೇ ವಾರದಲ್ಲಿ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗುತ್ತೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಸಮಯ ಕೇಳಿದ್ದೇವೆ. ಅವರ ಜೊತೆ ಚರ್ಚಿಸಿ ಚುನಾವಣೆ ನಡೆಸಲಾಗುವದು.
ಗಂಗಪ್ಪ.ಎಂ.
ಉಪವಿಭಾಗಾಧಿಕಾರಿ. ಗದಗ