ಗದಗ:ಗದಗ ಜಿಲ್ಲೆಯ ಜೀವನಾಡಿಯಾಗಿರೋ ತುಂಗಭದ್ರೆಗೆ ಅದ್ಯಾರ ಕೆಟ್ಟು ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಏಕಾಏಕಿ ತುಂಗಭದ್ರಾ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಗದಗ, ಮಂಡರಗಿ ಮತ್ತು ಶಿರಹಟ್ಟಿ ಭಾಗದ ಜನರಲ್ಲಿ ಆತಂಕ ತಂದೊಡ್ಡಿದೆ.
ಗದಗ ವರದಿ:ಮಹಲಿಂಗೇಶ್ ಹಿರೇಮಠ
ಹೌದು, ಗದಗ ಜಿಲ್ಲೆಯಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ (ಪಚ್ಚೇ ಬಣ್ಣ) ಕ್ಕೆ ತಿರುಗಿದೆ. ಇದರಿಂದ ಜಿಲ್ಲೆಯ ಜನರು ಸಾಕಷ್ಟು ಆತಂಕ್ಕಕ್ಕೀಡಾಗಿದ್ದು, 24×7 ಕುಡಿಯುವ ನೀರಿನ ಯೋಜನೆ ಒಳಗೊಂಡಿರೋ, ಗದಗ ನಗರ ಸೇರಿದಂತೆ ಮುಂಡರಗಿ ಹಾಗೂ ಶಿರಹಟ್ಟಿ ಭಾಗದ ಜನರಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರಿನ ಆತಂಕ ಮನೆ ಮಾಡಿದೆ.

ವಿಪರ್ಯಾಸ ಅಂದರೆ, ಕಳೆದ ಒಂದು ವಾರದಿಂದ ನದಿ ನೀರು ಈ ರೀತಿಯ ಬಣ್ಣಕ್ಕೆ ತಿರುಗಿದ್ದು, ಮೊದ ಮೊದಲು, ನದಿ ನೀರು ಪಾಚಿಗಟ್ಟಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಬರುಬರುತ್ತಾ ದಿನಗಳೆದರೂ, ನೀರು ತನ್ನ ಮೊದಲಿನ ಬಣ್ಣಕ್ಕೆ ಹಿಂದಿರುಗಿಲ್ಲ. ಮತ್ತಷ್ಟು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಆತಂಕಗೊಂಡ ನದಿ ಪಾತ್ರದಲ್ಲಿನ ರೈತರು ತಮ್ಮ ದನ ಕರುಗಳನ್ನ ನದಿಯಲ್ಲಿ ನೀರು ಕುಡಿಸಲು ಹಿಂದೇಟು ಹಾಕಿದ್ದು, ನದಿ ನೀರನ್ನ ಜಾನುವಾರು ಸೇರಿದಂತೆ ತಾವುಗಳು ಕುಡಿಯಲು ಹೆದರುತ್ತಿದ್ದಾರೆ.
ಎಲ್ಲೆಲ್ಲಿ ಹಸಿರು ಬಣ್ಣಕ್ಕೆ ತಿರುಗಿದೆ?
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರು ಏತನೀರಾವರಿ ಯೋಜನೆಯಡಿ, ತುಂಗಭದ್ರಾ ನದಿಗೆ ಬ್ಯಾರೇಜ್ ನ್ನ (ಕಿರು ಆಣೆಕಟ್ಟು) ನಿರ್ಮಿಸಲಾಗಿದೆ. ಸದ್ಯ ಬ್ಯಾರೇಜ್ ಹಿನ್ನಿರಿನಲ್ಲಿಯೂ ಇರುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಅಲ್ಲಿಂದ ಮುಂದೆ, ಕೊರ್ಲಹಳ್ಳಿ-ಮದಲಗಟ್ಟಿ ಸೇತುವೆ ವರೆಗೂ ನದಿಯ ನೀರು ಹಸಿರುಗೊಂಡಿದೆ.
ನದಿ ನೀರು ಈ ಬಣ್ಣಕ್ಕೆ ತಿರುಗಿದ್ದಷ್ಟೇ ಅಲ್ಲದೆ, ನದಿ ಪಾತ್ರದಲ್ಲಿರುವ ಜಮೀನುಗಳಿಗೂ ಸಹ ಪಂಪಸೆಟ್ ಗಳ ಮೂಲಕ ಇದೇ ನೀರು ಹರಿಯುತ್ತಿದೆ. ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಎಲ್ಲಿ ಏನಾಗುತ್ತವೆಯೋ ಅನ್ನೋ ಆತಂಕ ರೈತರಲ್ಲಿ ಕಾಡುತ್ತಿದೆ.ಅಲ್ಲದೇ ಜಮೀನಿನಲ್ಲಿನ ನೀರನ್ನ ಸಾಮಾನ್ಯವಾಗಿ ಪ್ರಾಣಿ, ಪಕ್ಷಿಗಳು ಹಾಗೂ ಜಾನುವಾರುಗಳು ಸೇವಿಸುವ ಸಂಭವ ಹೆಚ್ಚಾಗಿಯೇ ಇರುತ್ತದೆ. ಇದರಿಂದ ಎಲ್ಲಿ? ಯಾರ ಪ್ರಾಣಕ್ಕೆ ಹಾನಿಯಾಗುತ್ತೆದೆಯೋ ಅನ್ನೋ ಭಯದಲ್ಲಿ ರೈತವರ್ಗ ಚಡಪಡಿಸುತ್ತಾ, ಬೇರೆ ದಾರಿಯಿಲ್ಲದೇ ಅದೇ ಹಸಿರು ಬಣ್ಣಕ್ಕೆ ತಿರುಗಿದ ನೀರನ್ನ ಕೆಲವೊಂದು ಕಡೆ ಬಳಕೆ ಮಾಡುತ್ತಿದ್ದಾರೆ.
ಅಧಿಕಾರಿಗಳ ಗಾಢ ನಿದ್ರೆ!
ಕಳೆದೊಂದು ವಾರದಿಂದ ನದಿ ನೀರು ಈ ರೀತಿ ಕಲುಷಿತಗೊಂಡಿದ್ದರೂ ಸಹ, ಯಾವ ಇಲಾಖೆಯ ಅಧಿಕಾರಿಗಳೂ ತೀವ್ರಗತಿಯಲ್ಲಿ ಕಾರ್ಯಪ್ರವೃತ್ತರಾಗಿಲ್ಲ. ರೈತರು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿರೋ, ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರಿನ ವಿಡಿಯೋ ತುಣುಕಗಳನ್ನ ನೋಡಿದ ಮೇಲೆ, ಅಧಿಕಾರಿಗಳು ಎಚ್ಚೆತ್ತುಗೊಂಡಿದ್ದು, ಕುಳಿತಲ್ಲೇ ಮಾಹಿತಿ ತರಿಸಿಕೊಂಡು, ಒಂದು ಇಲಾಖೆಯಿಂದ ಮತ್ತೊಂದು ಇಲಾಖೆ ಮೇಲೆ, ಒಬ್ಬರ ಮೇಲೆ, ಮತ್ತೊಬ್ಬರು ಹಾಕುತ್ತಾ, ನೀರು ಕಲುಷಿತಗೊಂಡಿರುವ ಗಂಭೀರ ವಿಷಯವನ್ನ ನಿರ್ಲ್ಷಕ್ಷಿಸಿ ನಿಧಾನಗತಿಯಲ್ಲಿ ಸರಿಪಡಿಸುವ ಕೆಲಸಕ್ಕೆ ಇಳಿದಿದ್ದು, ಅಮಾಯಕರ ಅಥವಾ ಪ್ರಾಣಿ ಪಕ್ಷಿಗಳ ಜೀವ ಹೋಗುವವರೆಗೂ, ಸಂಬಂಧಿಸಿದ ಅಧಿಕಾರಿವರ್ಗ ಗಾಢ ನಿದ್ರೆಯಿಂದ ಎದ್ದೇಳುವಂತೆ ಕಾಣಿಸುತ್ತಿಲ್ಲ.
ನದಿಗೆ ರಾಸಾಯನಿಕ ಸೇರಿತೆ!
ಹೌದು, ಈಗಾಗಲೇ ತುಂಗಭದ್ರಾ ನದಿ ಪಾತ್ರದಲ್ಲಿ ಹಲವಾರು ಕಾರ್ಖಾನೆಗಳು ಬೀಡುಬಿಟ್ಟಿವೆ. ಇವುಗಳಿಂದ ಬರುವ ತ್ಯಾಜ್ಯಯುಕ್ತ (ರಾಸಾಯನಿಕ) ನೀರನ್ನ ನದಿಗೆ ಹರಿಬಿಟ್ಟಿದ್ದರಿಂದ ನದಿಯ ನೀರು ಹೀಗಾಯಿತಾ? ಅನ್ನುವ ಅನುಮಾನ ಕಾಡತೊಡಗಿದೆ. ಅಧಿಕಾರಿಗಳೇ ಹೇಳುವ ಪ್ರಕಾರ, ಡಾವಣಗೆರೆ ನಗರದಲ್ಲಿನ ಡ್ರೈನೆಜ್ ವಾಟರ್ ನ್ನ ಬಿಟ್ಟಿರಬಹುದು? ಅಥವಾ ಹರಿಹರ ಪಟ್ಟಣದಲ್ಲಿನ ಫಾಲಿಫೈಬ್ರಿಕ್ಸ್ ಕಾರ್ಖಾನೆಯಿಂದ ತ್ಯಾಜ್ಯಯುಕ್ತ ನೀರನ್ನ ಬಿಟ್ಟಿರಬಹುದು? ಅಥವಾ ವಿಜಯನಗರ ಸಕ್ಕರೆ ಕಾರ್ಖಾನೆ ಯಿಂದೇನಾದರೂ ತ್ಯಾಜ್ಯಯುಕ್ತ ನೀರನ್ನ ನದಿಗೆ ಹರಿಬಿಟ್ಟಿದ್ದಾರಾ? ಅನ್ನೋದನ್ನ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕಾಗಿದೆ. ಅಥವಾ ನದಿ ನೀರನ್ನ ಪ್ರಯೋಗಾಲಯಕ್ಕೆ ಕಳಿಸಿ, ಯಾವ ಕಾರಣದಿಂದ ನೀರು ಈ ಬಣ್ಣಕ್ಕೆ ತಿರುಗಿದೆ ಅನ್ನೋದನ್ನ ಪತ್ತೆ ಮಾಡಬೇಕು ಎನ್ನುತ್ತಿದ್ದಾರೆ.

ಆದರೆ, ಮೊದಲೇ ಹೇಳಿದಂತೆ, ಸಂಬಂಧಪಟ್ಟ ಯಾವ ಅಧಿಕಾರಿಗಳು ಈ ವಿಚಾರದಲ್ಲಿ ತುರ್ತಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತೆ, ಬೇರೆಯವರು ಹೇಳಿದ ಮಾತನ್ನೇ, ತಮ್ಮದೇ ವರದಿ ಎಂಬಂತೆ, ಸಮಸ್ಯೆಯ ಗಂಭೀರತೆಯನ್ನ ಅರಿತುಕೊಳ್ಳದೇ ಮುಂದೂಡುತ್ತಾ ಹೊರಟಿದ್ದಾರೆ.
ಅಪಾಯ ನಿರ್ಲಕ್ಷಿಸುವಂತಿಲ್ಲ!
ಇನ್ನು ಬ್ಯಾರೇಜ್ ಹಿಂಭಾಗದಲ್ಲಿ ಗದಗ ಹಾಗೂ ಮುಂಡರಗಿ ಪ್ರದೇಶಗಳಿಗೆ ಕುಡಿಯುವ ನೀರು ಸಂಪರ್ಕಿಸುವ ಜ್ಯಾಕ್ ವೆಲ್ ಗಳಿದ್ದು, ಆ ಭಾಗದಲ್ಲಿ ನೀರು ಕಲುಷಿತಗೊಂಡಿಲ್ಲ ಎನ್ನಲಾಗ್ತಿದೆ. ಹೀಗಾಗಿ ಅಲ್ಲಿನ ಜ್ಯಾಕ್ ವೆಲ್ ಗಳಿಂದ ಹೊರಹೋಗುವ ನೀರಿನ ಪ್ರದೇಶಗಳಿಗೆ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಆದರೆ ಮುಂಡರಗಿ ತಾಲೂಕಿನ, ಕಕ್ಕೂರು, ಕಕ್ಕೂರು ತಾಂಡೆ, ಹೆಸರೂರು ಹಾಗೂ ನಾಗರಹಳ್ಳಿ ಗ್ರಾಮಗಳ ಭಾಗದಲ್ಲಿ, ಇದೇ ನದಿಯಿಂದ (ಪ್ರತ್ಯೇಕ ಯೋಜನೆ) ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಯೋಜನೆಯಡಿ ನೀರನ್ನ ಒದಗಿಸಲಾಗ್ತಿದೆ. ನದಿ ನೀರಲ್ಲಿ ಈ ರೀತಿ ಹಸಿರು ಬಣ್ಣದ ಸಮಸ್ಯೆ ಕಂಡು ಬಂದ ತಕ್ಷಣವೇ ಆಯಾ ಗ್ರಾಮಗಳಿಗೆ ನೀರು ಒದಗಿಸುವ ಸಂಪರ್ಕವನ್ನ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ನದಿಯಲ್ಲಿರುವ ಜಲಚರಗಳಿಗಂತೂ ಈ ಹಸಿರು ಬಣ್ಣದ ನೀರಿನಿಂದ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಆದರೆ ಜಲಚರಗಳ ಹೊರತು ಪಡಿಸಿ, ಇತರೆ ಮೂಕ ಪ್ರಾಣಿಗಳು ನದಿಯಲ್ಲಿ ನೀರು ಕುಡಿಯುವದನ್ನ ತಡೆ ಒಡ್ಡಲು ಅಸಾಧ್ಯ. ಹೀಗಾಗಿ ಒಂದು ವೇಳೆ ಸಂಭವಿಸುವ ಅಪಾಯವನ್ನೂ ಇಲ್ಲಿ ನಿರ್ಲಕ್ಷಿಸುವಂತಿಲ್ಲ ಅನ್ನೋದನ್ನ ಅರಿಯಬೇಕಾಗಿದೆ.
ಇನ್ನಾದರೂ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿವರ್ಗ ಮೈ ಚಳಿ ಬಿಟ್ಟು, ತುಂಗಭದ್ರಾ ನದಿಗೆ ಬಂದಿರೋ ಗಂಭೀರ ಸಮಸ್ಯೆಯನ್ನ ಸರಿಪಡಿಸುವಲ್ಲಿ, ಕಾರ್ಯಪ್ರವೃತ್ತರಾಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಾಗಿದೆ.
ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿರುವ ವಿಡಿಯೋ ಕೆಳಗಿನ Cityxpress ಯ್ಯೂಟ್ಯೂಬ್ ನಲ್ಲಿ ಇದೆ. ನೋಡಬಹುದು..