ಲಕ್ಷ್ಮೇಶ್ವರ: ತೆಗೊಳ್ಳಿ ಸಾರ್.. ತೆಗೊಳ್ಳಿ ಸಾರ್…ಸೊರೆಕಾಯಿ ಕೆಜಿಗೆ 20 ರೂಪಾಯಿ, ಬಸಳೆ ಕಟ್ಟಿಗೆ 10 ರೂಪಾಯಿ, ನಿಮ್ಗೆ ಮಾತ್ರ 15 ರೂ.ಗೆ ಸಾರ್… ಊರಿನ ತರಕಾರಿ ಸಾರ್. ಮತ್ತೆ ಮುಗಿಯುತ್ತೆ… ಬೇಗ ತಗೋಳಿ. ಇದೇನಿದು ಹೀಗೆಲ್ಲಾ ಬರೆದಿದ್ದಾರೆ ಅನಕೊಂಡ್ರಾ! ಹೌದು, ಶಾಲಾ ಮಕ್ಕಳು ಈ ಚಟುವಟಿಕೆಯಲ್ಲಿ ಸಂತೆ ಮಾಡೋದು ಹೇಗೆ ಅನ್ನೋ ಪರಿಕಲ್ಪನೆಯನ್ನು ಪ್ರದರ್ಶನ ಮಾಡಿದರು. ಈ ಮಕ್ಕಳ ಸಂತೆ ನಡೆದಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಶಾಲಾ ವಠಾರದಲ್ಲಿ ತರಕಾರಿ ವ್ಯಾಪಾರ ಮಾಡಿದ್ದು ಹೀಗೆ.
ಇಂಥದೊಂದು ವಿಶಿಷ್ಟ ಕಲಿಕಾ ಮತ್ತು ವ್ಯವಹಾರಿಕ ಜ್ಞಾನವನ್ನು ಶಾಲೆ ವತಿಯಿಂದ ಆಯೋಜಿಸಲಾಗಿತ್ತು. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ವಿಜ್ಞಾನ ಮಾದರಿ ತಯಾರಿಸಿ ಸ್ಪರ್ಧೆಗೆ ಇಡಲಾಗಿತ್ತು. ಉಳಿದಂತೆ ವಿಜ್ಞಾನ ಪ್ರಯೋಗದ ಪರಿಕರಗಳ ಪ್ರದರ್ಶನ, ಪ್ರಾಚ್ಯ ವಸ್ತುಗಳ ಪ್ರದರ್ಶನ ಮತ್ತು ಸಂತೆ ವ್ಯಾಪಾರದಲ್ಲಿ ಮಕ್ಕಳು ಭಾಗವಹಿಸುವುದಕ್ಕೆ ಆಯೋಜಿಸಲಾಗಿತ್ತು. ಇದರಿಂದ ಮಕ್ಕಳಿಗೆ ಬದುಕಿನ ವಾಸ್ತವ ಸ್ಥಿತಿ ಅರಿವಿಗೆ ಬರುತ್ತದೆ ಎಂಬುವುದು ಆಯೋಜಕರ ಅಭಿಪ್ರಾಯ.
ಸಂತೆ ವ್ಯಾಪಾರದಲ್ಲಿ ತರಕಾರಿ, ನಾನಾ ಹಣ್ಣು ಹಂಪಲು, ಸೊಪ್ಪು ತರಕಾರಿ, ಗೆಣಸು, ಮಜ್ಜಿಗೆ ಮತ್ತಿತರರ ಸಾಮಗ್ರಿಗಳನ್ನು ಮಕ್ಕಳು ಸಂತೆಯಲ್ಲಿ ವ್ಯಾಪಾರಕ್ಕೆ ಜೋಡಿಸಿದ್ದರು. ಮಕ್ಕಳು ವ್ಯಾಪಾರದಲ್ಲಿ ಖರೀದಿಸುವುದಕ್ಕೆ ಮಕ್ಕಳ ಪೋಷಕರು ಮತ್ತು ಊರಿನ ಜನ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ಸಾಮಗ್ರಿಗಳ ಚೌಕಾಶಿಯಲ್ಲಿ ತೊಡಗಿದ್ದರು. ಮಕ್ಕಳು ಮಾತ್ರ ವ್ಯಾಪಾರದ ಮೂಲ ವಿಚಾರವನ್ನು ತಿಳಿದುಕೊಂಡು ಚೌಕಾಶಿಗೆ ತಕ್ಕ ಉತ್ತರವನ್ನು ಕೊಡುತ್ತಿದ್ದು, ಕೇಳುವುದಕ್ಕೆ ಮತ್ತು ನೋಡುವುದಕ್ಕೆ ತುಂಬಾ ಆಸಕ್ತಿದಾಯಕವಾಗಿತ್ತು.
ಪ್ರಾಚ್ಯವಸ್ತುಗಳ ಪ್ರದರ್ಶನದಲ್ಲಿ ಹಳೆ ಕಾಲದ ವಿವಿಧ ಮರದ ಬಳಕೆಯ ವಸ್ತುಗಳು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಇದೆಲ್ಲವನ್ನು ‘ಮಕ್ಕಳಲ್ಲಿ ವಿಜ್ಞಾನ ಕುರಿತು ಆಸಕ್ತಿ ಬೆಳೆಸಲು ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಅವರ ಆಶಯವನ್ನು ಕೈಗೂಡಿಸಲಾಗಿತ್ತು.ಒಟ್ಟಾರೆಯಾಗಿ ಮಕ್ಕಳ ಸಂತೆ ವ್ಯಾಪಾರ ಮಾತ್ರ ಸಕ್ಕತ್ ಮಜಾ ಕೊಟ್ಟಿದ್ದು ಸುಳ್ಳಲ್ಲ.ಇದನ್ನು ನೋಡಿ ಮಕ್ಕಳ ಪೋಷಕರಿಗೆ ಖುಷಿಯಾಗಿದ್ದು ಮಾತ್ರ ಸತ್ಯ.
ಇದಕ್ಕಾವುದಕ್ಕೂ ಶಿಕ್ಷಕರಾಗಲಿ,ಮಕ್ಕಳಾಗಲಿ ಹೆಚ್ಚು ಹಣ ವೆಚ್ಚ ಮಾಡಲಿಲ್ಲ. ನಮ್ಮ ಶ್ರಮ ಮಾತ್ರ ವೆಚ್ಚ ಮಾಡಿದ್ದೇವೆ ಎಂಬುವುದು ಶಾಲೆ ಮುಖ್ಯೋಪಾಧ್ಯಾಯೆ ಎಸ್. ಎಚ್.ಉಮಚಗಿ ಹೇಳಿದರು.