ಮುಂಡರಗಿ: ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯ ಅರ್ಹ ಬಡ ಜನತೆಗೆ ಆಶ್ರಯ ಮನೆಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ, ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ‘ಪಟ್ಟಣದ ಬಡ ಜನತೆಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಅರೇಳು ವರ್ಷಗಳ ಹಿಂದೆ ಪಟ್ಟಣದ ಹೊರವಲಯದಲ್ಲಿ 25 ಎಕರೆ ಜಮೀನು ಖರೀದಿಸಲಾಗಿದೆ. ಆದರೆ ಸಂಬಂಧಪಟ್ಟವರು ಅಲ್ಲಿ ಈವರೆಗೂ ಮನೆಗಳನ್ನು ನಿರ್ಮಿಸದೇ ಬಡ ಜನತೆಯನ್ನು ಸತಾಯಿಸುತ್ತಿದ್ದಾರೆ ಆರೋಪಿಸಿದರು.
ಆಶ್ರಯ ಮನೆ ನಿರ್ಮಾಣಕ್ಕೆ ಗುರುತಿಸಿ ರುವ ಜಮೀನಿನಲ್ಲಿ 1,008 ನಿವೇಶನಗಳನ್ನು ತಯಾರಿಸಲಾಗಿದ್ದು, ಅಲ್ಲಿ ಈವರೆಗೂ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಅಲ್ಲಿಯ ನಿವೇಶನಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾನೂನು ಬಾಹಿರವಾಗಿ ಅನರ್ಹರಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ರಾಜೀವ್ ಗಾಂಧಿ ವಸತಿ ಬೆಂಗಳೂರು, ಜಿಲ್ಲಾ ನಗರ ಕೋಶಾಧಿಕಾರಿ ಮತ್ತು ಸಚಿವಾಲಯ ಮೊದಲಾದವುಗಳು ನಿರ್ಗತಿಕ ಕುಟುಂಬಗಳನ್ನ ಪಾರದರ್ಶಕವಾಗಿ ಆಯ್ಕೆ ಮಾಡಿ ವಿತರಿಸಬೇಕೆಂದು ಸೂಚಿಸಿವೆ. ಆದರೆ ಇಲ್ಲಿನ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಪಲಾನುಭವಿಗಳನ್ನ ಆಯ್ಕೆ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಸರ್ಕಾರದ ನಿಯಮದಂತೆ ಅರ್ಹ ಫಲಾನುಭವಿಗಳನ್ನ ಆಯ್ಕೆ ಮಾಡಿ ಆಶ್ರಯ ಮನೆಗಳನ್ನ ವಿತರಿಸದಿದ್ದರೆ ಜ.21 ರಂದು ಪುರಸಭೆ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಮೈನುದ್ದಿನ ಗರಡಿಮನಿ, ಸುರೇಶ ಕುಂಬಾರ, ಮಹಮ್ಮದ್ ಲಂಗೋಟಿ, ಶಿವಪುತ್ರಪ್ಪ ದೊಡ್ಡಮನಿ,ಮೌಲಾ ಹುಸೇನ್ ಸೈಯದ್, ಚಂದ್ರು ಮಡಿವಾಳರ, ರಾಜಾಸಾಬ್ ಹಲವಾಗಲಿ, ಬಸವರಾಜ ಹೊಂಬಾಳೆ, ನಜೀರ್ ಕಲಕೇರಿ, ಮಂಜುನಾಥ ಕಟ್ಟಿಮನಿ, ರಿಯಾಜ್ ಹೊಸಪೇಟೆ, ಗೋವಿಂದರಾಜು ಕುಂಕುಮಗಾರ, ಅಲ್ಲಾಬಕ್ಷಿ ಗರಡಿಮನಿ, ರೆಹಮಾನ್ ಸಾಬ್ ಒಂಟಿ ಇದ್ದರು.