ಗದಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಬಳಿ ನಡೆದಿದೆ.
ಹೊಸಪೇಟೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಮಹ್ಮದ್ ಜಾಯಿದ್ (18) ಹಾಗೂ ಸಂಜೀವ ಗಿರಡ್ಡಿ (15) ಅನ್ನುವ ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿಗಳಾಗಿದ್ದಾರೆ.
ಆಶೀಸ್ ಗೂಡುರ್ ಹಾಗೂ ಚಾಲಕ ಸಪ್ತಗಿರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಗದಗ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಹುಲಕೋಟಿ ಯಿಂದ ಗದಗ ಕಡೆ ಬರುವಾಗ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ರಭಸಕ್ಕೆ ರಸ್ತೆ ಬದಿ ಇರುವ ಕಂಬಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮೃತ ಯುವಕರು ಗದಗ ನಿವಾಸಿಗಳಾಗಿದ್ದು, ಅತಿಯಾದ ವೆಗವೇ ಈ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಘಟನೆಯಲ್ಲಿ ಗದಗ ಜಿಲ್ಲೆಯ ರೋಣದ ಸಮುದಾಯ ಆರೋಗ್ಯಾಧಿಕಾರಿ ಡಾ.ಹನುಮರೆಡ್ಡಿ ಗಿರಡ್ಡಿ ಅವರ ಪುತ್ರ ಸಂಜೀವ ಗಿರಡ್ಡಿ (15) ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪುತ್ರ ಮಹಮದ್ ಜಾಯಿದ್ ಮುಜಾವರ್ (18) ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ ಹುಲಕೋಟಿಯ ರಾಜರಾಜೇಶ್ವರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಗದಗ ನಗರಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.ಮೃತಪಟ್ಟ ಸಂಜೀವ್ SSLC ವಿದ್ಯಾರ್ಥಿ ಆಗಿದ್ದರೆ, ಮಹಮದ್ ಜಾಯಿದ್ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಎನ್ನಲಾಗಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.