ಗದಗ: ನಗರದ ದಿ. ಕಾಟನ್ ಸೇಲ್ ಸೊಸೈಟಿಯ ಆವರಣದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿ. 26ರಂದು ನಿಧನರಾದ ಆರ್ಥಿಕ ಸುಧಾರಣೆಯ ಹರಿಕಾರ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಡಾ. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ, ಎರಡು ನಿಮಿಷಗಳ ಕಾಲ ಮೌನಚರಣೆ ಮಾಡಲಾಯಿತು.
ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಉಪನ್ಯಾಸಕರಾಗಿ, ಆರ್ಥಿಕ ಸಲಹೆಗಾರರಾಗಿ, ಆರ್ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಿದ ಧೀಮಂತ ನಾಯಕನಾಗಿದ್ದರು ಎಂದರು.
ಪ್ರಧಾನ ಮಂತ್ರಿ ಹುದ್ದೆಯನ್ನು ಪ್ರತಿಯೊಬ್ಬರು ನಾಯಕತ್ವದ ಸ್ಥಾನ, ರಾಜಕೀಯದ ಅತೀ ದೊಡ್ಡ ಸ್ಥಾನ ಎಂದು ಭಾವಿಸುತ್ತಾರೆ. ಆದರೆ, ಡಾ. ಮನಮೋಹನ ಸಿಂಗ್ ಅವರು ಅವರು ಅದೊಂದು ಸರ್ಕಾರಿ ನೌಕರಿ ಎಂದು ಭಾವಿಸಿ ಸಮರ್ಪಕ ಆಡಳಿತ ನಡೆಸಿದ್ದರು. ದೇಶ ಸೇರಿದಂತೆ ವಿದೇಶದಲ್ಲೂ ಪ್ರಧಾನಿ ಹುದ್ದೆಗೆ ಒಂದು ಗೌರವ ತಂದುಕೊಟ್ಟಿದ್ದರು. ರಾಜಕಾರಣ ಬದಿಗಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸಿದ್ದರು. ಅಂದಿನ ರಾಜಕೀಯದಲ್ಲಿ ಮನಮೋಹನ್ ಸಿಂಗ್ ಬಗ್ಗೆ ವಿರೋಧ ಪಕ್ಷದವರು ಹಲವಾರು ಟೀಕೆಗಳನ್ನು ಮಾಡಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ದೇಶದ ಕಾಯಕದಲ್ಲಿ ತೋಡಗಿದ್ದರು ಎಂದರು.
ಡಾ. ಮನಮೋಹನ್ ಸಿಂಗ್ ಅವರು ವಿದೇಶ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನು ಮಾದ್ಯಮದವರ ಮುಂದೆ ಹಂಚಿಕೊಳ್ಳುತ್ತಿದ್ದರು. ಅತೀ ಹೆಚ್ಚು ಪತ್ರಿಕಾಗೋಷ್ಠಿಯನ್ನು ನಡೆಸಿದ ಕೀರ್ತಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ಗೆ ಸಲ್ಲುತ್ತದೆ. ಅಲ್ಲದೇ ಡಾ. ಅಂಬೇಡ್ಕರ್ ಬಗ್ಗೆ ಡಾ. ಮನಮೋಹನ್ ಸಿಂಗ್ ಅವರಿಗೆ ಅಪಾರ ಗೌರವವಿತ್ತು. ತಮ್ಮ ಸೇವೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮೀಸಲಿಟ್ಟಿದ್ದರು. ಅವರ ನಡೆ, ರಾಜಕೀಯ ನಿಲುವು, ಮಾರ್ಗದರ್ಶನ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಮೇಲಿರಲಿ. ಅವರ ಅಗಲಿಕೆ ದೇಶಕ್ಕೆ ದೊಡ್ಡ ಹಾನಿಯಾಗಿದ್ದು, ಅವರ ಸ್ಥಾನವನ್ನು ಮತ್ತೊಬ್ಬ ರಾಜಕಾರಣಿ ತುಂಬಲಾರರು ಎಂದು ಕೃಷ್ಣಗೌಡ ಎಚ್ ಪಾಟೀಲ ಅಭಿಪ್ರಾಯಪಟ್ಟರು.
ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಆವರು ದೇಶ ಕಂಡAತಹ ಮಹಾನ್ ಚೇತನರಾಗಿದ್ದಾರೆ. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ, ವಿಶೇಷ ಆರ್ಥಿಕ ವಲಯ, ಆಹಾರ ಭದ್ರತೆ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಹತ್ತು ಹಲವಾರು ಯೋಜನೆಗಳ ಜಾರಿ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ದೇಶ ಕಂಡ ಅತ್ಯಂತ ಮುಗ್ದ ಮನಸ್ಸಿನ ರಾಜಕಾರಣಿಗಳಲ್ಲಿ ಡಾ. ಮನಮೋಹನ್ ಸಿಂಗ್ ಆವರು ಒಬ್ಬರಾಗಿದ್ದರು, ರೈತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಅವರು 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಂತಿದ್ದರು. ದೇಶದಲ್ಲಿ ನರ್ಮ್ ಯೋಜನೆ, ಸರ್ವಶಿಕ್ಷಣ ಅಭಿಯಾನಕ್ಕೆ ಶಕ್ತಿ, ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ, ಚಂದ್ರಯಾನ, ಮಂಗಳಯಾನದ ಕನಸು ಸೇರಿ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮುಳಗುಂದ ಬ್ಲಾಕ್ ಕಾಂಗ್ರೆಸ್ ಸನಿತಿ ಅಧ್ಯಕ್ಷ ಬಸವರಾಜ ಸುಂಕಾಪೂರ, ಶ್ರೀನಿವಾಸ ಹುಯಿಲಗೋಳ, ಎಸ್.ಎನ್. ಬಳ್ಳಾರಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ, ಮಹಮ್ಮದ್ ಶಾಲಗಾರ, ಮಹಮ್ಮದಸಾಬ್ ಬೆಟಗೇರಿ, ಮಾರ್ತಾಂಡಪ್ಪ ಹಾದಿಮನಿ, ದ್ರಾಕ್ಷಾಯಿಣಿ ಹಾಸಿಲಕರ, ಯಲ್ಲಮ್ಮ ಜಡಿ, ವನಜಾಕ್ಷಿ ಜಡಿ, ವಿನೋದ ಸಿದ್ಲಿಂಗ್, ಎಚ್.ಕೆ. ಭೂಮಕ್ಕನವರ, ಮೋಹನ ದೊಡಕುಂಡಿ, ಸೋಮು ಲಮಾಣಿ, ಸೋಮರೆಡ್ಡಿ ರಾಮೇನಹಳ್ಳಿ, ಶಿವಾನಂದ ಮಾದಣ್ಣವರ, ರಮೇಶ ರೋಣದ, ಉಮೇಶ ಹೂಗಾರ, ಅನಿಲ ಗರಗ, ವಿಜಯ ನೀಲಗುಂದ, ಶಿವರಾಜ ಕೊಟಿ, ಇರ್ಫಾನ ಡಂಬಳ, ಅಜ್ಜಪ್ಪ ಹುಗ್ಗೆಣ್ಣವರ, ಚಂದ್ರು ಹಿರೇಮಠ, ಲಕ್ಷ್ಮಣ ವಡ್ಡರಕಲ್ಲ, ಆಂಜನೇಯ ಕಟಗಿ, ಹನುಮಂತಪ್ಪ ಕಕ್ಕೇರಿ, ನಂದರಗಿ, ಚನ್ನವೀರ ಮಳಗಿ, ಶಾಂತಣ್ಣ ಮುಳವಾಡ, ರವಿಕುಮಾರ ರೆಡ್ಡಿ ಸೇರಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಹಾಜರಿದ್ದರು.