ಗದಗ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸದ್ಯ ದೇಶದಲ್ಲಿಯೇ ಸಾಕಷ್ಟು ಸದ್ದು ಮಾಡುತ್ತಿವೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆ ಅದೆಷ್ಟೋ ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡುವದಲ್ಲದೇ ಸ್ವಾವಲಂಬಿ ಜೀವನ ತಂದು ಕೊಟ್ಟಿದೆ.
ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ತಾವು ಕೂಡಿಟ್ಟ ಹಣದೊಂದಿಗೆ ತಮಗೆ ಹಾಗೂ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ಅದನ್ನ ಬಳಕೆ ಮಾಡುತ್ತಿರುವದು ಕಂಡು ಬಂದಿದ್ದು,ಕೆಲವೊಂದು ಗ್ರಾಮದಲ್ಲಿ ಮಹಿಳೆಯರು ಕೂಡಿಕೊಂಡು ಗೃಹಲಕ್ಷ್ಮೀ ಹಣದಿಂದ ದೇವಸ್ಥಾನಕ್ಕೆ ರಥವನ್ನೇ ನಿರ್ಮಿಸಿಕೊಟ್ಟ ಉದಾಹರಣೆಗಳು ಸಹ ಗದಗ ಜಿಲ್ಲೆಯಲ್ಲಿ ನಡೆದಿವೆ.
ಇದೀಗ ಅತ್ತೆ-ಸೊಸೆ ಕೂಡಿಕೊಂಡು ಗೃಹಲಕ್ಷ್ಮೀ ಹಣದಿಂದ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿರೋ ಅತ್ತೆ ಮಾಬುಬೀ ಮಾಲಧಾರ್, ಸೊಸೆ ರೋಷನ್ ಬೇಗಂ ಮಾಲಧಾರ್ ಕೂಡಿಕೊಂಡು, ಗೃಹ ಲಕ್ಷೀ ಯೋಜನೆಯ ಪ್ರತಿ ತಿಂಗಳ ಬರುವ ದುಡ್ಡನ್ನು ಕೂಡಿಟ್ಟು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ.
ಇವರಿಬ್ಬರೂ ಕೂಡಿಟ್ಟ ಹಣ ಒಟ್ಟು ₹44 ಸಾವಿರ ರೂ ಆಗಿದೆ. ಬೋರ್ ವೆಲ್ ಕೊರಿಸೋಕೆ ಒಟ್ಟು ಮೊತ್ತ ₹60 ಸಾವಿರ ಖರ್ಚು ಆಗುತ್ತೆ. ಅದರಲ್ಲಿ ಅತ್ತೆ-ಸೊಸೆ ಕೂಡಿಟ್ಟ ಗೃಹಲಕ್ಷ್ಮೀ ಯೋಜನೆಯ ಹಣ ₹44 ಸಾವಿರ ಹಣವನ್ನ, ಬೋರ್ ವೆಲ್ ಖರ್ಚಿಗೆ ತಮ್ಮ ಮಗನ ಕೈಗೆ ಹಣ ನೀಡಿ ಬೋರ ವೆಲ್ ಕೊರೆಸಲು ಸಹಕಾರಿಯಾಗಿದ್ದಾರೆ. ಉಳಿದ ಹಣವನ್ನು ಇವರ ಮಗ ಜೋಡಿಸಿ ಬೋರ್ ವೆಲ್ ಖರ್ಚಿನ ಪೂರ್ಣ ಮೊತ್ತವನ್ನ ಕೊಟ್ಟಿದ್ದಾರೆ.
ತಮ್ಮ 3 ಎಕರೆ ಜಮೀನಿನಲ್ಲಿ ಈ ಬೋರ್ ವೆಲ್ ಕೊರಿಸಿದ್ದು, ಒಂದೂವರೆ ಇಂಚಿಗೆ ಕೊಳವೆಬಾವಿಯಲ್ಲಿ ನೀರು ಉಕ್ಕಿದೆ. ಇದರಿಂದ ಹರ್ಷಗೊಂಡ ಕುಟುಂಬ, ಸಿದ್ದರಾಮಯ್ಯ ಅವರು ನೀಡಿದ ಗೃಹ ಲಕ್ಷೀ ಯೋಜನೆ ತುಂಬಾನೆ ಅನುಕೂಲವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.