ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ಟೌನ್ನಲ್ಲಿ ನಡೆದಿದ್ದ ಹೇರ್ ಡ್ರೈಯರ್ ಸ್ಫೋಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು ಎರಡೇ ದಿನದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಪ್ರೀತಿಗೆ ಅಡ್ಡ ಬಂದವಳ ಕೊಲೆಗೆ ಆರೋಪಿ ಸ್ಕೆಚ್ ಹಾಕಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಡ್ರೈಯರ್ ಸ್ಫೋಟವಾಗಿ ಮೃತ ಯೋಧನ ಪತ್ನಿ ಕೈ ಕಳೆದುಕೊಂಡಿದ್ದಳು.ಈ ಸ್ಫೋಟದ ಭೀಕರತೆ ಕಂಡು ಎಲ್ಲರೂ ಶಾಕ್ ಆಗಿದ್ದರು. ಸ್ಫೋಟದ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಇದೀಗ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಡೆದ ತನಿಖೆಯಲ್ಲಿ ಸ್ಫೋಟದ ಹಿಂದೆ ಲವ್ ಸ್ಟೋರಿ ಮತ್ತು ಕೊಲೆಗೆ ಸ್ಕೆಚ್ ಇರುವುದು ಬಹಿರಂಗವಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನವೆಂಬರ್ 15 ರಂದು ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ ಬಸವರಾಜೇಶ್ವರಿ ಯರನಾಳ (35) ಎರಡು ಮುಂಗೈ ಕಟ್ ಆಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಎಂದು ಅಚ್ಚರಿಯಾಗಿತ್ತು. ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ತನಿಖೆಯ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಎರಡೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ. ಆ ಮೂಲಕ ಬ್ಲಾಸ್ಟ್ ಹಿಂದೆ ಲವ್ ಸ್ಟೋರಿ ಇರುವುದು ಬಹಿರಂಗವಾಗಿದೆ.
ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ಇದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದು ಕೋಪಗೊಂಡಿದ್ದ ಸಿದ್ದಪ್ಪ, ಗ್ರಾನೈಟ್ ಡೆಟೊನೇಟರ್ ನ್ನ ಡ್ರೈಯರ್ನಲ್ಲಿ ಅಳವಡಿಸಿ ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಪ್ರೇಯಸಿ ಬಸವರಾಜೇಶ್ವರಿ ಕೈ ಕಳೆದುಕೊಳ್ಳುವಂತಾಗಿದೆ.
ಸಿದ್ದಪ್ಪ ಎಮ್ಎಬಿಎಡ್ ಓದಿದ್ದು, ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಮದುವೆಗೂ ಮುನ್ನವೇ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಬಸವರಾಜೇಶ್ವರಿ ಅವರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣನಿಗೆ ಮದುವೆ ಮಾಡಿ ಕೊಡಲಾಗಿತ್ತು. ಪಾಪಣ್ಣ 2017 ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ ಇವರಿಬ್ಬರ ಲವ್ ಮುಂದುವರೆದು ಮತ್ತಷ್ಟು ಗಟ್ಟಿಯಾಗಿತ್ತು.
ಬಸವರಾಜೇಶ್ವರಿ ರಕ್ಕಸಗಿ ಬಿಟ್ಟು ಇಳಕಲ್ ನಗರದ ಬಸವನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ನೆಲೆಸಿದ್ದಳು. ಸಿದ್ದಪ್ಪ ಅಲ್ಲಿಗೆ ಬರುವುದು ಹೋಗೋದು ಮಾಡುತ್ತಿದ್ದ. ಶಶಿಕಲಾ ಕೂಡ ಮೃತ ಯೋಧನ ಪತ್ನಿಯಾಗಿದ್ದಳು. ಇಬ್ಬರು ಸ್ನೇಹಿತೆಯರಾಗಿದ್ದರು. ಇದು ಸರಿಯಲ್ಲ ಆತನ ಸಹವಾಸ ಬಿಡು ಎಂದು ಹೇಳ್ತಿದ್ದಳು. ಈ ಹಿನ್ನೆಲೆ ಕೆಲ ದಿನಗಳಿಂದ ಬಸವರಾಜೇಶ್ವರಿ ಸಿದ್ದಪ್ಪನನ್ನು ಮನೆಗೆ ಬರಲು ಅವಕಾಶ ನೀಡಿರಲಿಲ್ಲ. ಇದರಿಂದ ಪಿತ್ತ ನೆತ್ತಿಗೇರಿಸಿಕೊಂಡು ಹದಿನೈದು ದಿನದಿಂದ ಶಶಿಕಲಾ ಕೊಲೆಗೆ ಸಿದ್ದಪ್ಪ ಸ್ಕೆಚ್ ಹಾಕಿದ್ದ. ಸಿದ್ದಪ್ಪ ಡಾಲ್ಫಿನ್ ಎಂಬ ಹೆಸರಿನ ಗ್ರಾನೈಟ್ ಕಂಪನಿಯಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿದ್ದ. ಆತನಿಗೆ ಡೆಟೊನೇಟರ್ ಸ್ಪೋಟದ ಬಗ್ಗೆ ಮಾಹಿತಿಯಿತ್ತು.
ಸಿದ್ದಪ್ಪ, ಡೆಟೊನೇಟರ್ ಸ್ಪೋಟಕ ಬಳಸಿ ಶಶಿಕಲಾ ಕೊಲೆಗೆ ಸ್ಕೆಚ್ ಹಾಕಿದ್ದ. ಇಳಕಲ್ ನಗರದ ದೇವಗಿರಿಕರ್ ಎಂಬುವರ ಅಂಗಡಿಯಲ್ಲಿ ನವೆಂಬರ್ 10 ರಂದು 500 ರೂ. ಕೊಟ್ಟು ಹೇರ್ ಡ್ರೈಯರ್ ಖರೀದಿಸಿದ್ದ. ಅದರಲ್ಲಿ ಡೆಟೊನೇಟರ್ ಅಳವಡಿಸಿ ನ. 13 ರಂದು ಕೊರಿಯರ್ ಮಾಡಿದ್ದ. ಬಾಗಲಕೋಟೆ ಡಿಟಿಡಿಸಿ ಕೊರಿಯರ್ನಿಂದ ಇಳಕಲ್ ಡಿಟಿಡಿಸಿ ಕೊರಿಯರ್ಗೆ ಶಶಿಕಲಾ ಹಾಗೂ ಆಕೆಯ ನಂಬರ್ ಹಾಕಿ ಕಳಿಸಿದ್ದ. ಕವರ್ ಮೇಲೆ ವಿಶಾಖಪಟ್ಟಣ ಎಂದು ತಾನೆ ಬರೆದಿದ್ದ. ಹೇರ್ ಡ್ರೈಯರ್ ಶಶಿಕಲಾ ಪಡೆಯುತ್ತಾಳೆ. ಅದನ್ನು ಆಕೆ ಬಳಸೋದಕ್ಕೆ ಆನ್ ಮಾಡ್ತಾಳೆ. ಆಗ ಬ್ಲಾಸ್ಟ್ ಆಗಿ ಅವಳ ಪ್ರಾಣಕ್ಕೆ ಕುತ್ತು ಬರೋದು ಪಕ್ಕಾ ಅನ್ನೋ ಲೆಕ್ಕಾಚಾರ ಸಿದ್ದಪ್ಪನದ್ದಾಗಿತ್ತು.
ಆದರೆ ಶಶಿಕಲಾ ಕೋರಿಯರ್ ರಿಸಿವ್ ಮಾಡಿಕೊಳ್ಳಲು ತಾನು ಹೋಗುವ ಬದಲಾಗಿ ಬಸವರಾಜೇಶ್ವರಿ ಕಳಿಸಿದ್ದಾಳೆ.ಇಲ್ಲಿ ಅದೃಷ್ಟವಶಾತ್ ಶಶಿಕಲಾ ಪಾರಾಗಿದ್ದಾಳೆ. ಸಿದ್ದಪ್ಪ ಮಾಡಿದ ಪ್ಲ್ಯಾನ್ ಆತನಿಗೆ ಉಲ್ಟಾ ಹೊಡೆದಿದೆ. ಪ್ರೀತಿಗೆ ಅಡ್ಡಲಾಗಿದ್ದ ಶಶಿಕಲಾ ಕೊರಿಯರ್ ರಿಸಿವ್ ಮಾಡುವ ಬದಲಾಗಿ, ಸಿದ್ಧಪ್ಪನ ಪ್ರೇಯಸಿ ಬಸರಾಜೇಶ್ವರಿಯೇ ಕೋರಿಯರ್ ರಿಸಿವ್ ಮಾಡಿದ್ದರ ಪರಿಣಾಮ ಸಿದ್ಧಪ್ಪನ ಪ್ಲ್ಯಾನ್ ತಿರುಗುಬಾಣವಾಗಿದ್ದು, ಇದೀಗ ಇಳಕಲ್ ನಗರ ಪೊಲೀಸರ ತನಿಖೆ, ಸಿಡಿಆರ್ ಮೂಲಕ ಮಾಹಿತಿ ಸಂಗ್ರಹಿಸಿ ಪೊಲೀಸರು ಎಲ್ಲ ಬಯಲಿಗೆ ಎಳೆದಿದ್ದಾರೆ.
ಒಟ್ಟಿನಲ್ಲಿ ಪ್ರೀತಿಗೆ ಅಡ್ಡಿಯಾದವಳಿಗೆ ಹಾಕಿದ ಸ್ಕೆಚ್ ಪ್ರಿಯತಮೆಗೆ ಮುಳುವಾಗಿದೆ. ಪ್ರಿಯತಮೆ ಕೈ ಕಳೆದುಕೊಂಡರೆ ಪ್ರಿಯಕರ ಅಂದರ್ ಆಗಿದ್ದಾನೆ.